ತೇರದಾಳ: ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗುವುದರ ಜೊತೆಗೆ ಮಹಿಳೆಯರು ಮಾನಸಿಕವಾಗಿ, ದೈಹಿಕವಾಗಿ ಸಬಲರಾಗುವ ಮೂಲಕ ಕೌಟುಂಬಿಕ ಪ್ರಗತಿಗೆ ತಮ್ಮದೇ ಆದ ಬಹುಮುಖ್ಯ ಪಾತ್ರವಹಿಸಬೇಕಿದೆ ಎಂದು ಹೊಮಿಯೋಪಥಿ ತಜ್ಞೆ ಡಾ.ಅನಂತಮತಿ ಯಂಡೊಳ್ಳಿ ಹೇಳಿದರು.
ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್, ಪಟ್ಟಣದ ದಾನಿಗೊಂಡ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಮಹಾಲಕ್ಷ್ಮಿ ಮಹಿಳಾ ಮಂಡಳದ ಸಹಯೋಗದಲ್ಲಿ ಜರುಗಿದ ಉಚಿತ ಹೊಲಿಗೆ ತರಬೇತಿ ಮುಕ್ತಾಯ ಹಾಗೂ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇನ್ಫೋಸಿಸ್ ಸಾಮಾಜಿಕ ಸೇವಾ ಸಂಘಟನೆ ಮುಖ್ಯಸ್ಥ ನಾರಾಯಣ ಕುಲಕರ್ಣಿ ಮಾತನಾಡಿ, ₹ 300 ಕೋಟಿ ವೆಚ್ಚದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ಒಟ್ಟು 130 ಕಾರ್ಯಕ್ರಮ ನಡೆಸುತ್ತಿದ್ದು, ಮುಧೋಳದಲ್ಲಿ ಎಚ್ಐವಿ ಪೀಡಿತ 2 ಸಾವಿರ ಜನರಿಗೆ ಆಶ್ರಯ, ಆಹಾರ, ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಘಟಪ್ರಭಾದಲ್ಲಿ ಪುನರ್ವಸತಿ ಕಲ್ಪಿತ ಮಹಿಳೆಯರಿಗೆ ಆಶ್ರಯ, ಆಹಾರ, ಅವರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು, ಉದ್ಯೋಗ ತರಬೇತಿ ನೀಡಲಾಗುತ್ತಿದೆ. ಯೋಜನೆಗಳು ಫಲಾನುಭವಿಯನ್ನು ತಲುಪಿದ್ದರ ಮೇಲೆ ನಿಗಾ ವಹಿಸಲು ಪ್ರತ್ಯೇಕ ತಂಡ ಉಸ್ತುವಾರಿಯಲ್ಲಿದೆ. ಮಹಿಳೆಯರು ಕುಟುಂಬಕ್ಕಂಟಿದ ಬಡತನದ ಭೂತ ಹೊಡೆದೋಡಿಸಲು ಶ್ರದ್ಧೆಯುತ ದುಡಿಮೆಯ ಮಂತ್ರವನ್ನು ನಮ್ಮ ಮುಂದಿನ ಪೀಳಿಗೆ ಬಳುವಳಿಯಾಗಿ ನೀಡಬೇಕಿದೆ ಎಂದರು.
ಮುಧೋಳದ ಕಮಲಾ ಜೇಡರ, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಪುಷ್ಪದಂತ ದಾನಿಗೊಂಡ, ಹೇಮಲತಾ ನಿರಂಜನ, ಮಾತನಾಡಿದರು.
ಸಂಸ್ಥೆಯ ಆಡಳಿತಾಧಿಕಾರಿ ರಾಜೇಂದ್ರ ಪರೀಟ, ಡಾ.ಪ್ರಭಾಕರ ಅಪರಾಜ, ಡಾ.ಪೂರ್ಣಿಮಾ ಉಂಡಿ, ಅಮೃತಾ ಶಿರಗಾವಿ, ಅಶ್ವಿನಿ ನಾಯ್ಕರ, ಸುರೇಖಾ ಅಮ್ಮಣಗಿಮಠ, ರಶ್ಮಿ ಗಸ್ತಿ, ಸುರೇಶ ವಾಲೀಕಾರ ಸೇರಿದಂತೆ 250 ತರಬೇತಿ ಪಡೆದ ಮಹಿಳೆಯರು ಪಾಲ್ಗೊಂಡಿದ್ದರು. ಸಿದ್ದು ಹಾವೋಜಿ ನಿರ್ವಹಿಸಿದರು.
ಮಹಿಳೆಯರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಹಳಿಯುತ್ತ ಕುಳಿತುಕೊಳ್ಳದೇ ಅದನ್ನು ಎದುರಿಸುವ ಕುರಿತು ಆತ್ಮವಿಶ್ವಾಸ ಸಂಸ್ಕಾರ ಮೂಡಿಸಬೇಕುಡಾ.ಅನಂತಮತಿ ಯಂಡೊಳ್ಳಿ ಹೊಮೀಯೋಪಥಿ ತಜ್ಞೆ
ದಾನಿಗೊಂಡ ಸಂಸ್ಥೆಯಲ್ಲಿ ತರಬೇತಿ ನೀಡಿ ಇನ್ಫೋಸಿಸ್ ಪ್ರತಿಷ್ಠಾನದ ನೆರವಿನೊಂದಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಗಿದೆಡಾ.ಮಧುರಾ ದಾನಿಗೊಂಡ ನೇತ್ರತಜ್ಞೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.