ADVERTISEMENT

ಮುಧೋಳದ ರನ್ನ ಶುಗರ್ಸ್‌ ಭವಿಷ್ಯ ಸರ್ಕಾರದ ಕೈಲಿಲ್ಲ: ಶಿವರಾಮ ಹೆಬ್ಬಾರ

ಸರ್ಕಾರದ ಆರ್ಥಿಕ ಸ್ಥಿತಿ ಜರ್ಜರಿತ: ಸಚಿವ ಅರಬೈಲು ಶಿವರಾಮ ಹೆಬ್ಬಾರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 14:19 IST
Last Updated 31 ಜುಲೈ 2020, 14:19 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಬಾಗಲಕೋಟೆ: 'ಮುಧೋಳದ ರನ್ನ ಸಹಕಾರ ಸಕ್ಕರೆ ಕಾರ್ಖಾನೆಯ ಭವಿಷ್ಯ ಆಡಳಿತ ಮಂಡಳಿ ಕೈಯಲ್ಲಿದೆಯೇ ಹೊರತು ಸರ್ಕಾರದ ಕೈಯಲ್ಲಿ ಇಲ್ಲ. ಹಣ ಕೊಡುವ ಸ್ಥಿತಿಯಲ್ಲೂ ನಾವು ಇಲ್ಲ'ಎಂದು ಸಕ್ಕರೆ ಸಚಿವ ಅರಬೈಲು ಶಿವರಾಮ ಹೆಬ್ಬಾರ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಆಡಳಿತ ಮಂಡಳಿ ನೀಡಿದ್ದ ರಾಜೀನಾಮೆಯನ್ನು ಗುರುವಾರ ವಾಪಸ್ ಪಡೆದಿದೆ. ಬೇರೆ ಬೇರೆ ಬ್ಯಾಂಕ್‌ಗಳ ಮೂಲಕ ಸಂಪನ್ಮೂಲ ಕ್ರೋಢೀಕರಿಸಿಕೊಂಡು ಅವರು ಕಾರ್ಖಾನೆ ಆರಂಭಿಸಲಿ ಎಂದು ಸಲಹೆ ನೀಡಿದರು.

ಕೋವಿಡ್ 19 ಸಂಕಷ್ಟದ ಕಾರಣ ಸರ್ಕಾರ ಆರ್ಥಿಕವಾಗಿ ಜರ್ಜರಿತವಾಗಿದೆ. ಹೀಗಾಗಿ ಸರ್ಕಾರದಿಂದ ಸಹಾಯ ಕೇಳುವ ಹಂಬಲ ಬೇಡ. ಆ ಶಕ್ತಿಯೂ ನಮಗೆ ಇಲ್ಲ. ಈಗಿನ ಸ್ಥಿತಿಯಲ್ಲಿ ಒಂದು ರೂಪಾಯಿ ಕೊಡುವ ಪರಿಸ್ಥಿತಿಯಲ್ಲಿ ನಾವು ಇಲ್ಲ. ನಿಮ್ಮ ಕಾಲ ಮೇಲೆ ನಿಂತುಕೊಂಡು ಕೆಲಸ ಮಾಡಿ ಎಂದು ಆಡಳಿತ ಮಂಡಳಿಗೆ ಸೂಚಿಸಿದರು.

ADVERTISEMENT

ಸಿಎಂ ಅಥವಾ ಡಿಸಿಎಂ ಗೋವಿಂದ ಕಾರಜೋಳ ಮನವೊಲಿಸಿ ನೀವು ಹಣ ತಂದರೆ ನನ್ನದೇನೂ ಅಭ್ಯಂತವಿಲ್ಲ ಎಂದು ಹೇಳಿದ ಹೆಬ್ಬಾರ, ರನ್ನ ಶುಗರ್ಸ್‌ನ ಸಕ್ಕರೆ ಹರಾಜಿನಿಂದ ಸಂಗ್ರಹವಾದ ₹41 ಕೋಟಿ ಜಿಲ್ಲಾಡಳಿತದ ಖಾತೆಯಲ್ಲಿದೆ. ಆದರೆ ಈ ವಿಚಾರ ನ್ಯಾಯಾಲಯದಲ್ಲಿ ಇರುವುದರಿಂದ ಕಬ್ಬು ಪೂರೈಸಿದ ರೈತರಿಗೆ ಬಾಕಿ ಪಾವತಿಸಲು ಆಗಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಬೇಗನೇ ಇತ್ಯರ್ಥಗೊಂಡು ರೈತರಿಗೆ ಬಾಕಿ ಪಾವತಿಸಲು ಹಾಗೂ ಕಾರ್ಖಾನೆಯ ಕಾರ್ಮಿಕರಿಗೆ ಪಾವತಿಸಬೇಕಾದ ವೇತನ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿರುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.