ಮಹಾಲಿಂಗಪುರ: ‘ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾತ್ರ ಸಾಧನೆ ಮಾಡಬೇಕೆಂಬುದು ಇಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮ ಆಸಕ್ತಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಾಧನೆ ಮಾಡಲು ಸಾಧ್ಯವಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದರೆ ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಲು ಶಕ್ತಿ ದೊರೆಯುತ್ತದೆ’ ಎಂದು ಬೆಂಗಳೂರಿನ ಇಸ್ರೋದ ಯು.ಆರ್.ರಾವ್ ಉಪಗ್ರಹ ಕೇಂದ್ರದ ಸಹ ನಿರ್ದೇಶಕ ರಾಮನಗೌಡ ನಾಡಗೌಡ ಹೇಳಿದರು.
ಸಮೀಪದ ರನ್ನಬೆಳಗಲಿಯ ಢಪಳಾಪುರ ವಿದ್ಯಾವಿಹಾರ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಧಕರ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಿಶ್ವದರ್ಜೆ ಮಟ್ಟಕ್ಕೆ ಇಸ್ರೋ ಏರಲು ಹಲವು ಜನರ ಪರಿಶ್ರಮವಿದೆ. ಇಸ್ರೋದಲ್ಲಿ ಹೆಚ್ಚಿನ ಜನರು ಹಳ್ಳಿಗಾಡು ಹಾಗೂ ಸಾಧಾರಣ ಕುಟುಂಬಗಳ ಹಿನ್ನೆಲೆಯಿಂದ ಬಂದವರು. ಅವರೆಲ್ಲ ದೇಶ ಸುಭದ್ರ ಆಗಬೇಕೆಂಬ ಉದ್ದೇಶ ಹೊಂದಿದವರು’ ಎಂದರು.
‘ವಿದ್ಯಾರ್ಥಿಗಳು ಶ್ರದ್ಧೆ, ಭಕ್ತಿಯಿಂದ ಅಧ್ಯಯನದಲ್ಲಿ ತೊಡಗಬೇಕು. ತಂದೆ-ತಾಯಿ ಮಾತು ಕೇಳಬೇಕು. ಗುರು ಹಿರಿಯರಲ್ಲಿ ಭಕ್ತಿ ಹೊಂದಬೇಕು. ಗುರಿ ಸಾಧಿಸಬೇಕೆಂಬ ನಿರ್ಧಾರ ಕೈಗೊಂಡು ಅದರತ್ತ ಮುನ್ನಡೆಯಬೇಕು. ನಿಮ್ಮ ನಿಮ್ಮ ಕ್ಷೇತ್ರದಲ್ಲೂ ನಿಮ್ಮದೇ ಆದ ಕೊಡುಗೆ ನೀಡಬೇಕು’ ಎಂದು ಸಲಹೆ ನೀಡಿದರು.
ಹುಬ್ಬಳ್ಳಿಯ ಡಾ.ಪ್ರಕಾಶ ನಾಡಗೌಡ, ಡಾ.ವಿಜಯ ಹಂಚಿನಾಳ, ಡಾ.ಅಜೀತ ಕನಕರೆಡ್ಡಿ, ಶಾಲೆ ವ್ಯವಸ್ಥಾಪಕ ವಿವೇಕ ಢಪಳಾಪುರ, ಪ್ರಾಚಾರ್ಯ ಜಾಯ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.