ADVERTISEMENT

ಅನರ್ಹರಿಗೆ ಮನೆ ಹಂಚಿಕೆ: ಸಿಐಟಿಯು ಆರೋಪ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 9:55 IST
Last Updated 24 ಜನವರಿ 2012, 9:55 IST

ಕುರುಗೋಡು: ವಸತಿ ರಹಿತರಿಗೆ ಮನೆ ಹಂಚಿಕೆ ಮಾಡಲು ಪಟ್ಟಣದ ಗ್ರಾಮ ಪಂಚಾಯ್ತಿಯಲ್ಲಿ ನಡೆಸಿದ ಗ್ರಾಮ ಸಭೆ ನ್ಯಾಯಸಮ್ಮತವಾಗಿರದೆ ಕಚೇರಿ ಪುಸ್ತಕದಲ್ಲಿ ದಾಖಲಿಸಿಕೊಳ್ಳಲು ನಾಮಕಾವಸ್ತೆಗೆ ನಡೆಸಲಾಗಿದೆ ಎಂದು ಸಿಐಟಿಯು ಜಿಲ್ಲಾ ಮುಖಂಡ ಎಚ್. ಎಂ. ವಿಶ್ವನಾಥಸ್ವಾಮಿ ಆರೋಪಿಸಿದ್ದಾರೆ.

ಸಮೀಪದ ಯಲ್ಲಾಪುರ ಗ್ರಾಮದಲ್ಲಿ ಭಾನುವಾರ ನಡೆದ ವಸತಿ ರಹಿತರ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದರು.

ಗ್ರಾಮದ ವಸತಿ ರಹಿತರನ್ನು ಸೇರಿಸಿ ಗ್ರಾಮಸಭೆ ನಡೆಸಿ ವಿವಿಧ ಯೋಜನೆಯ ವಸತಿ ಹಂಚಕೆ ಮಾಡಲು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎನ್ನುವ ಸರ್ಕಾರದ ಸ್ಪಷ್ಟ ನಿರ್ದೇಶನವಿದೆ. ಆದರೂ ಕುರುಗೋಡು ಗ್ರಾಮ ಪಂಚಾಯಿತಿಯಲ್ಲಿ ಬಸವ ಯೋಜನೆಯಲ್ಲಿ ಹಂಚಿಕೆ ಮಾಡಬೇಕಾದ ಮನೆಗಳನ್ನು ಶಾಸಕರು ಸೂಚಿಸಿದ ಪಕ್ಷದ ಕಾರ್ಯಕರ್ತರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಶಾಸಕರ ಶಿಫಾರಸು ಪಟ್ಟಿ ಕೈಬಿಟ್ಟು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.

ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಶಾಸಕರ ಒತ್ತಡಕ್ಕೆ ಮಣಿದು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.  ಸಿದ್ಧಗೊಂಡ ಪಟ್ಟಿಯನ್ನು ಕೈಬಿಟ್ಟು ನ್ಯಾಯಸಮ್ಮತವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಇಲ್ಲವಾದರೆ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.

ಯಲ್ಲಾಪುರ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ತಿಪ್ಪೇರುದ್ರ, ಅಧ್ಯಕ್ಷ ಮಾಬುಸಾಬ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ವಸತಿ ರಹಿತ ಹೋರಾಟ ಸಮಿತಿ ಅಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಮೌಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಎರ‌್ರಿಸ್ವಾಮಿ, ಖಜಾಂಚಿ ನಾಗಪ್ಪ, ದೇವದಾಸಿ ಮಹಿಳಾ ಸಂಘದ ಸೋಮಕ್ಕ, ಎಚ್. ಮಲ್ಲಕ್ಕ, ಮಲ್ಲಿಕಾರ್ಜುನ, ಬಿಳಿಬಾಯಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.