ಬಳ್ಳಾರಿ: ನಗರದ ಪಶುಸಂಗೋಪನಾ ಇಲಾಖೆ ಕಚೇರಿ ಆವರಣದಲ್ಲಿ ಇತ್ತೀಚೆಗೆ ಪಶು ವೈದ್ಯಕೀಯ ಸಹಾ ಯಕರ ತರಬೇತಿ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಶಾಸಕ ಜಿ. ಸೋಮಶೇಖರರೆಡ್ಡಿ ನೆರವೇರಿಸಿದರು.
ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಪಶುವೈದ್ಯಕೀಯ ಇಲಾಖೆಯ ಎಲ್ಲ ವರ್ಗದ ಅಧಿಕಾರಿ/ ಸಿಬ್ಬಂದಿಗಳಿಗೆ ಹಾಗೂ ರೈತರಿಗೆ ಪುನಶ್ಚೇತನ ತರಬೇತಿ ನೀಡುವ ಉದ್ದೇಶದಿಂದ ಈ ಕಟ್ಟಡ ನಿರ್ಮಿಸಲಾಗುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿ ಪಡೆದು ಜನಸಾಮಾನ್ಯರಿಗೆ ಅದರಲ್ಲೂ ರೈತರಿಗೆ ಸೇವೆ ಸಲ್ಲಿಸಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಜೆ. ಪಂಪಾಪತಿ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ರಾಜ್ಯ ವಲಯದ ಯೋಜನೆಯಡಿ ರೂ 58.25 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪಶು ವೈದ್ಯಾಧಿಕಾರಿ ಡಾ. ಶಶಿಧರ್ ಈ ತರಬೇತಿ ಕೇಂದ್ರದಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯ ಅಧಿಕಾರಿಗಳಿಗೆ ವಿವಿಧ ತಾಂತ್ರಿಕ ತರಬೇತಿಯನ್ನು ರೈತ ಬಾಂಧವರಿಗೆ, ಪ್ರಗತಿಪರ ರೈತರಿಗೆ, ಪಶು ವೈದ್ಯಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ತರಬೇತಿ ಯನ್ನು ನಿರಂತರವಾಗಿ ನೀಡಲಾಗು ವುದು.
ಜಿಲ್ಲೆಯಲ್ಲಿ ಕೆಎಂಎಫ್ ಘಟಕ ಇರುವುದರಿಂದ ಎಸ್ಜೆಎಸ್ವೈ ಅಡಿ ರೈತ ಮಹಿಳೆಯರಿಗೆ ಹೈನುಗಾರಿಕೆ ತರಬೇತಿ ಸಹ ನೀಡಲಾಗುವುದು. ತರಬೇತಿಗೆ ಬರುವ ರೈತರಿಗೆ ವಸತಿ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದರು.
ಉಪ ಮೇಯರ್ ಶಶಿಕಲಾ, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ಸೋಮಪ್ಪ, ಮಹಾನಗರ ಪಾಲಿಕೆ ಸದಸ್ಯೆ ಲತಾ ಚೌಧರಿ, ಪೌರಾಯುಕ್ತ ಡಿ.ಎಲ್. ನಾರಾಯಣ್, ನಿರ್ಮಿತಿ ಕೇಂದ್ರದ ಅಧಿಕಾರಿ ಶ್ರೀನಿವಾಸ ರಾವ್ ಕುಲಕರ್ಣಿ, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಗಾದಿಲಿಂಗನಗೌಡ, ಡಾ.ಮರಿ ಬಸವನ ಗೌಡ, ಡಾ. ಶ್ರೀನಿವಾಸ್ ಹಾಜರಿದ್ದರು. ಇದಕ್ಕೂ ಮುನ್ನ ರಾಮಯ್ಯ ಕಾಲೋನಿಯಲ್ಲಿ ಉದ್ಯಾನ, ಸತ್ಯ ನಾರಾಯಣಪೇಟೆಯಲ್ಲಿ ಉದ್ಯಾನ, ಗಾಂಧಿನಗರ ಹಾಗೂ ಕೋಟೆ ಪ್ರದೇಶದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.