ADVERTISEMENT

ಏತನೀರಾವರಿ ಪ್ರದೇಶಕ್ಕೆ ಅಧಿಕಾರಿಗಳಿಂದ ವೀಕ್ಷಣೆ

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 7:14 IST
Last Updated 2 ಆಗಸ್ಟ್ 2013, 7:14 IST

ಮರಿಯಮ್ಮನಹಳ್ಳಿ: ಕೊನೆಗೂ ಡಣಾಯಕನಕೆರೆ ಏತನೀರಾವರಿಯ ವಿಘ್ನಗಳು ಕೊನೆಗೊಳ್ಳುವ ಹಂತ ತಲುಪಿದ್ದು, ತುಂಗಭದ್ರ ಜಲಾಶಯದ ಹಿನ್ನೀರಿನಿಂದ ನೀರು ಹಾಯಿಸುವ ಏತನೀರಾವರಿ ಯೋಜನೆಯಿಂದ ಕೆರೆ ನೀರು ಬೀಳುವ ಸ್ಥಳಕ್ಕೆ ಗುರುವಾರ ಸಣ್ಣ ನೀರಾವರಿ ಇಲಾಖೆಯ ಕಿರಿಯ ಇಂಜಿನಿಯರ್ ಇಮಾಮ್‌ಸಾಹೇಬ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಈ ಬಗ್ಗೆ `ಪ್ರಜಾವಾಣಿ' ಮಂಗಳವಾರ `ನೀರು ಹಾಯಿಸಲು ನೂರೆಂಟು ವಿಘ್ನ' ಎಂಬ ತಲೆಬರಹದಡಿಯಲ್ಲಿ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಭೇಟಿ ನೀರು ಹರಿಯುವ ಪೈಪ್‌ಲೈನ್ ಸ್ಥಳವನ್ನು ವೀಕ್ಷಿಸಿದರು.

ಹದಿನೈದು ದಿನಗಳ ಕೆಳಗೆ ಗಡಿಬಿಡಿಯಲ್ಲಿಯೇ ಶಾಸಕ ಭೀಮಾನಾಯ್ಕ ನೀರು ಹಾಯಿಸುವ ಕಾರ್ಯಕ್ಕೆ ಚಾಲನೆ ನೀಡಿ ಒಂದೆರಡು ದಿನ ನೀರು ಕೆರೆಗೆ ಹರಿದರೂ ಪೈಪ್ ಲೈನ್‌ಗಳು ಅಲ್ಲಲ್ಲಿ ಕಿತ್ತು ಹೋಗಿದ್ದರಿಂದ ಬಾರಿ ನೀರು ಸೋರುವಿಕೆಯಿಂದಾಗಿ ಸದ್ಯ ತಾತ್ಕಾಲಿಕ ನಿಲುಗಡೆಯಾಗಿತ್ತು.

ಅಲ್ಲದೆ ಶಾಸಕ, ರೈತರ ಒತ್ತಡದಿಂದಾಗಿ ನೀರು ಹಾಯಿಸಲಾತಾದರೂ. ಒಂದೆರಡು ದಿನಗಳಲ್ಲಿ ಸುಮಾರು ಎಂಟು ಕಡೆಗಳಲ್ಲಿ ನೀರಿನ ಪೈಪುಗಳ ಸೋರಿಕೆಯಾಗಿ ಬಂದಾಗಿತ್ತು. ಅದರಲ್ಲಿ ಮುಖ್ಯವಾಗಿ ಬಿಎಂಎಂ ಕಾರ್ಖಾನೆಯ ಮೊದಲ ದ್ವಾರದಿಂದ ಸಾಗಿದ ಪೈಪ್‌ಲೈನ್‌ನಲ್ಲಿ ಅಧಿಕ ಪ್ರಮಾಣದ ಹಾನಿಯಾಗಿತ್ತು. ಈ ಭಾಗದಲ್ಲಿ ಕಾರ್ಖಾನೆಗೆ ತೆರಳುವ ಸುಮಾರು ಟನ್ ಸಾಮಾರ್ಥ್ಯದ ಭಾರಿ ವಾಹನಗಳು ಒಡಾಡುವದರಿಂದ ಪೈಪ್‌ಗಳ ಸೋರಿಕೆಯಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

ಈ ಸಂದರ್ಭದಲ್ಲಿ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಣ್ಣ ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್ ಇಮಾಮ್‌ಸಾಹೇಬ್, ಸದ್ಯ ಎಲ್ಲಾತರಹದ ಸೋರಿಕೆಯನ್ನು ತಡೆಗಟ್ಟಲಾಗಿದ್ದು, ಭಾರಿ ಸೋರಿಕೆಯಾದ ಬಿಎಂಎಂ ಕಾರ್ಖಾನೆಯ ಬಳಿ ಸಾಗಿದ ಪೈಪ್‌ಲೈನ್‌ಗೆ ಕಾಂಕ್ರಿಟ್ ಹಾಕಲಾಗಿದ್ದು, ಕಳೆದ ಬುಧವಾರ ರಾತ್ರಿ 250ಎಚ್‌ಪಿಯ ಒಂದು ಮೋಟಾರ್‌ನ್ನು ಆರಂಭಿಸಲಾಗಿದೆ. ಗುರುವಾರ ಮಧ್ಯಾಹ್ನ ಎರಡನೆ ಮೋಟಾರನ್ನು ಆರಂಭಿಸಲಾಗಿದ್ದು, ಯಾವದೇ ತರಹನಾದ ಭಾರಿ ಸೋರಿಕೆಗಳು ಕಂಡು ಬಂದಿಲ್ಲ.

ಕೆಲವೆಡೆ ಸಣ್ಣಪುಟ್ಟ ಲೀಕೇಜ್‌ಗಳು ಬಿಟ್ಟಿರೆ ಸಂಪೂರ್ಣವಾಗಿ ಎರಡು ಮೋಟಾರುಗಳಿಂದು ಕೆರೆಗೆ ನೀರು ಹರಿಸಲಾಗುತ್ತಿದೆ ಎಂದರು. ಸೋರಿಕೆ ಇದ್ದ ಕಡೆ ಬಗೆದ ಪೈಪ್‌ಲೈನ್‌ನ ಮಣ್ಣನ್ನು ಮುಚ್ಚಲು ಸೂಚಿಸಲಾಗಿದೆ ಎಂದು ವಿವರಿಸಿದರು. ಅಲ್ಲದೆ ಜಲಾಶಯದ ಹಿನ್ನೀರು ಹಿಂದೆ ಸರಿಯುವ ಮುಂಚೆಯೇ ಆದಷ್ಟು ಕೆರೆಗೆ ನೀರು ತುಂಬಿಸುವ ಪ್ರಯತ್ನ ಮಾಡಲಾಗುವದೆಂದರು.

ಇಲಾಖೆಯ ಶರಭಣ್ಣ, ಗೋವಿಂದರ ಪರಶುರಾಮ, ಸುರೇಶ್, ಹರಿಶಂಕರ್ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.