ಹೂವಿನಹಡಗಲಿ: ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸದ ರಾಶಿಯನ್ನು ಉತ್ಕೃಷ್ಟ ಗೊಬ್ಬರವಾಗಿ ಪರಿವರ್ತಿಸುವ ಯೋಜನೆಯನ್ನು ಇಲ್ಲಿನ ಪುರಸಭೆ ಅನುಷ್ಠಾನಗೊಳಿಸಿದ್ದು, ಕಸದಲ್ಲಿ ರಸ ತೆಗೆಯುವ ಪ್ರಯೋಗಕ್ಕೆ ಯಶಸ್ಸು ಸಿಕ್ಕಿದೆ.
ಪಟ್ಟಣದ ಹೊರವಲಯದ ಹೊಳಗುಂದಿ ರಸ್ತೆಯಲ್ಲಿರುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮತ್ತು ನಿರ್ವಹಣಾ ಘಟಕದಲ್ಲಿ ಪುರಸಭೆಯಿಂದ ₹5 ಲಕ್ಷ ವೆಚ್ಚದಲ್ಲಿ ಎರೆಹುಳು ಗೊಬ್ಬರ ತಯಾ ರಿಕಾ ಘಟಕವನ್ನು ಅಭಿವೃದ್ಧಿಪಡಿಸ ಲಾಗಿದೆ. ಬಿಸಾಡಿದ ಕಸದಲ್ಲೇ ಗೊಬ್ಬರ ಉತ್ಪಾದಿಸಿ ಮಾರಾಟ ಮಾಡಿ, ತನ್ನ ಆದಾಯ ಮೂಲವನ್ನು ವೃದ್ಧಿಸಿಕೊಳ್ಳಲು ಪುರಸಭೆ ಯೋಜಿಸಿದೆ.
ಪಟ್ಟಣದಲ್ಲಿ ಪ್ರತಿನಿತ್ಯ ಸಂಗ್ರಹವಾ ಗುವ 10 ಟನ್ಗೂ ಅಧಿಕ ಕಸವನ್ನು ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಹಸಿ ಕಸ, ಒಣ ಕಸ ಮತ್ತು ಪ್ಲಾಸ್ಟಿಕ್ಯುಕ್ತ ವಿಷಕಾರಿ ಕಸವನ್ನು ಬೇರ್ಪಡಿಸಲಾಗು ತ್ತದೆ. ಇದರಲ್ಲಿ ಸಂಸ್ಕರಿಸಿದ ಹಸಿ ಮತ್ತು ಒಣ ಕಸವನ್ನು ಆಯ್ದುಕೊಂಡು ತೊಟ್ಟಿಗ ಳಲ್ಲಿ ಸಂಗ್ರಹಿಸಲಾಗುತ್ತದೆ. ನೀರು ಮತ್ತು ಸಗಣಿ ರಾಡಿಯನ್ನು ಸುರಿದು ತೊಟ್ಟಿಗ ಳಲ್ಲಿ ಉಷ್ಣಾಂಶ ಕಡಿಮೆ ಯಾದ ಬಳಿಕ (ಆಫ್ರಿಕನ್ ವರ್ಮಿ) ಎರೆಹುಳುಗಳನ್ನು ಬಿಡಲಾಗುತ್ತದೆ. ನಂತರ ಎರಡು ತಿಂಗಳೊಳಗೆ ತ್ಯಾಜ್ಯಕಸ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಇದೀಗ ಎರೆ ಹುಳು ಗೊಬ್ಬರ ಮೊದಲ ಉತ್ಪಾದನೆ ಲಭಿಸಿದ್ದು, ಟೆಂಡರ್ ಕರೆದು ಮಾರಾಟ ಮಾಡಲು ಪುರಸಭೆ ಸಿದ್ಧತೆ ಮಾಡಿಕೊಂಡಿದೆ.
ಎರೆಹುಳು ಗೊಬ್ಬರ ಘಟಕದಲ್ಲಿ 6 ತೊಟ್ಟಿಗಳನ್ನು ನಿರ್ಮಿಸಲಾಗಿದೆ. ಪ್ರತಿ ತೊಟ್ಟಿಯಲ್ಲಿ 20 ಚೀಲ ಗೊಬ್ಬರ ಉತ್ಪಾ ದನೆ ನಿರೀಕ್ಷೆಯಿದ್ದು, ಮಾರುಕಟ್ಟೆ ಯಲ್ಲಿ ಚೀಲವೊಂದಕ್ಕೆ ₹500 ಬೆಲೆ ಯಿದೆ. ಎಲ್ಲ ತೊಟ್ಟಿಗಳಿಂದ ಎರಡು ತಿಂಗಳಿಗೊಮ್ಮೆ ಒಟ್ಟು ₹60,000 ಮೌಲ್ಯದ ಎರೆಹುಳು ಗೊಬ್ಬರ ಉತ್ಪಾ ದನೆ ಯಾಗಬಹುದು ಎಂಬುದು ಗೊಬ್ಬರ ತಯಾರಿಕಾ ಘಟಕ ಸಿಬ್ಬಂದಿ ಅಂದಾಜು.
‘ಪೌರ ಕಾರ್ಮಿಕ ಸಿಬ್ಬಂದಿ ಕೊರತೆ ಇರುವುದರಿಂದ ಇಲ್ಲಿ ಸಂಗ್ರಹವಾಗುವ ಎಲ್ಲ ಕಸವನ್ನು ಬೇರ್ಪಡಿಸಲು ತೊಂದರೆ ಯಾಗುತ್ತಿದೆ. ಗೊಬ್ಬರ ತಯಾರಿಕಾ ಘಟಕಕ್ಕೆ ಒಬ್ಬ ಕಾರ್ಮಿಕನನ್ನು ಮಾತ್ರ ನಿಯೋಜಿಸಿದ್ದು, ವಾರಕ್ಕೊಮ್ಮೆ ಪೌರ ಕಾರ್ಮಿಕರನ್ನು ಕರೆದೊಯ್ದು ಕಸ ಬೇರ್ಪಡಿಸುವ ಕೆಲಸ ಮಾಡಿಸ ಲಾಗುತ್ತಿದೆ. ಮನೆ ಮತ್ತು ಹೋಟೆಲ್ ಮಾಲೀಕರು ಹಸಿಕಸ, ಒಣಕಸ ಬೇರ್ಪ ಡಿಸಿ ಕೊಟ್ಟಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿಕೆಗೆ ಸಹಕಾರ ನೀಡಿದಂತಾ ಗುತ್ತದೆ’ ಎನ್ನತ್ತಾರೆ ಕಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್.
ಎರೆಹುಳು ಗೊಬ್ಬರ ತಯಾರಿಕೆಯಲ್ಲಿ ಯಶಸ್ಸು ಸಿಕ್ಕಿದೆ. ಬರುವ ದಿನಗಳಲ್ಲಿ ಹಸಿ ಕಸ, ಆಹಾರ ತ್ಯಾಜ್ಯದಿಂದ ಅಡುಗೆ ಅನಿಲ ತಯಾರಿಸುವ ‘ಬಯೋಗ್ಯಾಸ್ ಪ್ಲಾಂಟ್’ ತೆರೆಯಲು ಯೋಜಿಸಿದ್ದೇವೆ
– ಆರ್.ವಿರೂಪಾಕ್ಷಮೂರ್ತಿ,
ಮುಖ್ಯಾಧಿಕಾರಿ, ಪುರಸಭೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.