ADVERTISEMENT

ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 6 ಮೇ 2018, 7:19 IST
Last Updated 6 ಮೇ 2018, 7:19 IST

ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಲ್‌.ಬಿ.ಪಿ.ಭೀಮಾನಾಯ್ಕ ತಾಲ್ಲೂಕಿನ ಕಡಲಬಾಳು ಗ್ರಾಮದಲ್ಲಿ ಪ್ರಚಾರ ಕೈಗೊಂಡ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಎಂದು ಕೂಗಿದ್ದರಿಂದ ಶುಕ್ರವಾರ ರಾತ್ರಿ ಕೆಲಕಾಲ ಗೊಂದಲ ಉಂಟಾಯಿತು.

ಪಕ್ಷದ ಪ್ರಚಾರ ವಾಹನದಲ್ಲಿ ಗ್ರಾಮದ ಆಂಜನೇಯ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಭೀಮಾನಾಯ್ಕ ಅವರು ಭಾಷಣ ಮಾಡುವಾಗ ಏಕಾಏಕಿ ಬಂದ ಗುಂಪು ಬಿಜೆಪಿ ಪರವಾಗಿ ಘೋಷಣೆಗಳನ್ನು ಕೂಗಿದರು. ಆಗ ಅಲ್ಲಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದರು. ಪರಸ್ಪರ ಮಾತಿನ ಚಕಮಕಿ ನಡೆಯಿತು.

ಭಾಷಣ ಮುಂದುವರೆಸಿದ ಭೀಮಾನಾಯ್ಕ ಬಿಜೆಪಿ ದೇಶದಲ್ಲಿ ಏನು ಸಾಧನೆ ಮಾಡಿದೆ? ಎಲ್ಲರ ಖಾತೆಗಳಿಗೆ ₹15ಲಕ್ಷ ಹಾಕುವುದಾಗಿ ಹೇಳಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಮೋದಿ ಅಧಿಕಾರ ಸಿಕ್ಕಕೂಡಲೇ ನೀಡಿದ ಭರವಸೆ ಮರೆತು ದೇಶದ ಜನರನ್ನು ವಂಚಿಸಿದ್ದಾರೆ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ತಾಲ್ಲೂಕು ಪಂಚಾಯಿತಿ ಸದಸ್ಯ ಅನಿಲ್‌ಕುಮಾರ್ ಜಾಣರ್‌, ಕಾಂಗ್ರೆಸ್ ಪಕ್ಷದ ಮುಖಂಡರಾದ ಪವಾಡಿ ಹನುಮಂತಪ್ಪ, ಮುಟುಗನಹಳ್ಳಿ ಕೊಟ್ರೇಶ್, ಅಂಬಾಡಿ ನಾಗರಾಜ, ಕನ್ನಿಹಳ್ಳಿ ಚಂದ್ರಶೇಖರ್‌,ಪುರಸಭೆ ಸದಸ್ಯರಾದ ಜೋಗಿ ಹನುಮಂತಪ್ಪ, ಯು.ಬಾಬುವಲಿ ಇದ್ದರು.

ಮಾತಿನ ಚಕಮಕಿ: ತಾಲ್ಲೂಕಿನ ಅಂಕಸಮುದ್ರ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ವೈಯಕ್ತಕ ಅನುದಾನ ನೀಡುವ ಕುರಿತು ಗ್ರಾಮದ ವೆಂಕಟೇಶ್‌, ಕಲ್ಲೇಶ್‌, ಕೃಷ್ಣ ಇತರರು ಪ್ರಚಾರಕ್ಕೆ ತೆರಳಿದ್ದ ಭೀಮಾನಾಯ್ಕ ಅವರನ್ನು ಗ್ರಾಮದ ದಾರಿ ಮಧ್ಯೆ ತಡೆದರು. ಕಳೆದ ವರ್ಷ ದೇವಸ್ಥಾನಕ್ಕೆ ಅನುದಾನ ನೀಡುವುದಾಗಿ ಆಶ್ವಾಸನೆ ನೀಡಿದ್ದು ಸುಳ್ಳಾಗಿದೆ ಎಂದರು. ಹಣ ನೀಡುವಂತೆ ಒತ್ತಾಯಿಸಿದರು. ಆಗ ಪರಸ್ಪರ ಮಾತಿನ ಚಕಮಕಿ ನಡೆಯಿತು. ನೂಕಾಟ, ತಳ್ಳಾಟ ನಡೆಯಿತು. ಕೆಲಕಾಲ ಗೊಂದಲ ಉಂಟಾಯಿತು. ಗ್ರಾಮಸ್ಥರು ಬಿಜೆಪಿ ಪಕ್ಷದ ಮುಖಂಡರು ಎರಡೂ ಗುಂಪಿನ ಜನರನ್ನು ಸಮಾಧಾನ ಪಡಿಸಲು ಯತ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.