ADVERTISEMENT

ಕಾರ್ಯದರ್ಶಿ ಬಂಧನಕ್ಕೆ ಆಗ್ರಹ: ಧರಣಿ

ಕುರುಗೋಡು ಪತ್ತಿನ ಸಹಕಾರ ಸಂಘದ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 6:45 IST
Last Updated 13 ಡಿಸೆಂಬರ್ 2013, 6:45 IST
ಕುರುಗೋಡು ಪತ್ತಿನ ಸಹಕಾರ ಸಂಘದ ಅವ್ಯವಹಾರಕ್ಕೆ ಕಾರಣವಾರಾದ ಕಾರ್ಯದರ್ಶಿ ರುದ್ರಮುನಿ ಅವರನ್ನು ಕೂಡಲೇ ಬಂಧಿಸಿ, ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿ ಸಂಘದ ನೂರಾರು ಸದಸ್ಯರು ಬಳ್ಳಾರಿಯ ಜನತಾ ಬಜಾರ್ ಕಚೇರಿ ಎದುರು ಗುರುವಾರ ಅನಿರ್ಧಿಷ್ಟ ಅವಧಿಯ ಧರಣಿಗೆ ಚಾಲನೆ ನೀಡಿದರು.
ಕುರುಗೋಡು ಪತ್ತಿನ ಸಹಕಾರ ಸಂಘದ ಅವ್ಯವಹಾರಕ್ಕೆ ಕಾರಣವಾರಾದ ಕಾರ್ಯದರ್ಶಿ ರುದ್ರಮುನಿ ಅವರನ್ನು ಕೂಡಲೇ ಬಂಧಿಸಿ, ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿ ಸಂಘದ ನೂರಾರು ಸದಸ್ಯರು ಬಳ್ಳಾರಿಯ ಜನತಾ ಬಜಾರ್ ಕಚೇರಿ ಎದುರು ಗುರುವಾರ ಅನಿರ್ಧಿಷ್ಟ ಅವಧಿಯ ಧರಣಿಗೆ ಚಾಲನೆ ನೀಡಿದರು.   

ಬಳ್ಳಾರಿ: ಕುರುಗೋಡು ಪತ್ತಿನ ಸಹಕಾರ ಸಂಘದಲ್ಲಿ ಆಗಿರುವ ಲಕ್ಷಾಂತರ ರೂಪಾಯಿ ಅವ್ಯವಹಾರದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು. ಅವ್ಯವಹಾರದಲ್ಲಿ ಭಾಗಿಯಾಗಿರುವ ಸಂಘದ ಕಾರ್ಯದರ್ಶಿ ಎಚ್.ಎಂ.ರುದ್ರಮುನಿಯ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಸಂಘದ ಹಲವು ಸದಸ್ಯರು ನಗರದ ಜನತಾ ಬಜಾರ್ ಎದುರು ಅನಿರ್ಧಿಷ್ಟಾವಧಿ ಧರಣಿಗೆ ಗುರುವಾರ ಚಾಲನೆ ನೀಡಿದರು.

ಕುರುಗೋಡು ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಎಚ್.ಎಂ.ರುದ್ರಮುನಿ, ಸಂಘದ ಲಕ್ಷಾಂತರ ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಸಂಘದ ವ್ಯವಹಾರಗಳನ್ನು ಲೆಕ್ಕ ಪರಿಶೋಧಕರಿಂದ ಮಾಡಿಸದೆ, ಮೇಲಾಧಿಕಾರಿಗಳ ನಕಲಿ ಸೀಲ್, ಸಹಿಗಳನ್ನು ತಯಾರಿಸಿಕೊಂಡು ಸದಸ್ಯರ ಕಣ್ಣಿಗೆ ಮಣ್ಣೆರಚಿದ್ದಾರೆ. ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದ ಸಂಘದ ಈ ಹಿಂದಿನ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಅವರು ಬೇನಾಮಿ ಹೆಸರಲ್ಲಿ ಸತ್ತವರಿಗೂ ಸಾಲ ಮಂಜೂರು ಮಾಡಿ ಈಗ   ನಾಪತ್ತೆಯಾಗಿದ್ದಾರೆ ಎಂದು ಸಂಘದ ಸದಸ್ಯರಾದ ಹುಲುಗಪ್ಪ, ಎಚ್.ಎಂ.ವಿಶ್ವನಾಥ ಸ್ವಾಮಿ, ವಿ.ಎಸ್.ಶಿವಶಂಕರ್ ಆರೋಪಿಸಿದರು.

ಕೂಡಲೇ ರುದ್ರಮುನಿ ಅವರನ್ನು ಬಂಧಿಸಿ, ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕು. ಹೊಸದಾಗಿ ಸಾಲ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ’ಹೊಸದಾಗಿ ವ್ಯಾಪಾರ ಆರಂಭಿಸಲು ಸಾಲ ಕೇಳಿದರೆ ಸಾಲ ನಿರಾಕರಿಸುವ ರುದ್ರಮುನಿ, ಸುಮಾರು 5,0-60 ಜನರ ಬೇನಾಮಿ ಹೆಸರುಗಳ ಮೇಲೆ ಸಾಲ ಮಂಜೂರು ಮಾಡಿದ್ದಾರೆ. ಸಂಘದ ಕೆಲ ಸದಸ್ಯರ ಹೆಸರಲ್ಲೇ ಸಾಲ ನೀಡಲಾಗಿದೆ. ಎಲ್ಲ ದಾಖಲೆಗಳನ್ನು ರುದ್ರಮುನಿ ಅವರೇ ನಕಲು ಮಾಡಿಕೊಂಡು ಅಕ್ರಮ ನಡೆಸಿ ಹಣ ದೋಚಿದ್ದಾರೆ’ ಎಂದು ಆರೊಪಿಸಿದರು.

ಕೂಡಲೇ ಅವನನ್ನು ಬಂಧಿಸಿ, ಬಡ್ಡಿ ಸಮೇತ ಹಣ ವಸೂಲಿ ಮಾಡಬೇಕು. ಅಲ್ಲಿಯವರೆಗೂ ಧರಣಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿಭಟನೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಟಿ.ಖಾಜಾಸಾಬ್, ಹೆರೂರು ಪಂಪಣ್ಣ, ಎನ್.ರಂಗಪ್ಪ, ಶೇಖಣ್ಣ, ನೀಲಮ್ಮ ತಾಯಮ್ಮ ದೇವಿ ಸ್ತ್ರೀಶಕ್ತಿ ಸಂಘದ ಪಾರ್ವತಮ್ಮ, ಜ್ಯೋತಿ, ನಾಗಮ್ಮ ಸೇರಿದಂತೆ ನೂರಾರು ಜನರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.