ADVERTISEMENT

ಕುಡಿಯುವ ನೀರಿಗೆ 19 ಕೋಟಿ: ನಾಯ್ಕ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 4:30 IST
Last Updated 12 ಜನವರಿ 2012, 4:30 IST

ಮರಿಯಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರವನ್ನು ಫ್ಲೋರೈಡ್‌ಮುಕ್ತ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ರೂ 19 ಕೋಟಿ ವೆಚ್ಚದಲ್ಲಿ ಚಿಲಕನಹಟ್ಟಿ ಮತ್ತು ಜಿ.ನಾಗಲಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 14 ಹಳ್ಳಿಗಳಿಗೆ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರು ಒದಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ. ನೇಮಿರಾಜ್‌ನಾಯ್ಕ ಹೇಳಿದರು.

ಅವರು ಪಟ್ಟಣ ಸಮೀಪದ ಹಾರುವನಹಳ್ಳಿ ಗ್ರಾಮದಲ್ಲಿ ಬಸವ ವಸತಿ ಯೋಜನೆಯಡಿಯ ಮನೆಗಳ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಯೋಜನೆಗೆ ಮುಂಬರುವ ಮಾರ್ಚ್‌ನಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ಯೋಜನೆಯ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.

ಇದಲ್ಲದೆ ಸುಮಾರು 270 ಕೋಟಿ ವೆಚ್ಚದಲ್ಲಿ ಕೊಟ್ಟೂರು ಭಾಗದ 26 ಹಳ್ಳಿಗಳು ಹಾಗೂ ಹಗರಿಬೊಮ್ಮನಹಳ್ಳಿ ಭಾಗದ 82 ಹಳ್ಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯಿದೆ. ಈ ಯೋಜನೆಯ ಟೆಂಡರ್ ಸಹ ಮಾರ್ಚ್‌ನಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದರು.

`ರಾಜ್ಯದ ಬಿಜೆಪಿ ಸರ್ಕಾರ ಜನಸಾಮಾನ್ಯರ, ಬಡವರ ಹಾಗೂ ರೈತರ ಪರವಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ವಿರೋಧ ಪಕ್ಷದವರು ಅಮಾಯಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಸುಳ್ಳು ಆಶ್ವಾಸನೆ ನೀಡುವದಿಲ್ಲ, ಕೆಲಸ ಮಾಡಿ ತೋರಿಸುತ್ತಿದ್ದು, ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ~ ಎಂದು ಮನವಿ ಮಾಡಿದರು.

ತಾ.ಪಂ. ಮಾಜಿ ಅಧ್ಯಕ್ಷ ಪಿ. ಓಬಪ್ಪ, ಮಂಜುನಾಥ ಮಾತನಾಡಿದರು. ಚಿಲಕನಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಗಂಗೀಬಾಯಿ ರಾಮನಾಯ್ಕ, ಸದಸ್ಯೆ ತಿಪ್ಪಿಬಾಯಿ, ತಾ.ಪಂ. ಸದಸ್ಯೆ ಆನಂದಮ್ಮ ಮಾರ್ಗದಪ್ಪ, ಎಂ. ಬದರೀನಾಥ ಶೆಟ್ಟಿ, ಪಿ. ಸೂರ್ಯಬಾಬು, ಸಣ್ಣರಾಜಣ್ಣ, ಮಲ್ಲೇಶಪ್ಪ, ಭೂಸೇನಾ ನಿಗಮದ ಕುಮಾರಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.