ADVERTISEMENT

ಕುರುಗೋಡು: ಸ್ವತಂತ್ರ ಮಾರುಕಟ್ಟೆ ಘೋಷಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 9:21 IST
Last Updated 4 ಡಿಸೆಂಬರ್ 2013, 9:21 IST
ಕುರುಗೋಡಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆ
ಕುರುಗೋಡಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆ   

ಕುರುಗೋಡು: ಸ್ಥಳೀಯ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧೀನ ಮಾರುಕಟ್ಟೆಯಾಗಿ ಕಾರ್ಯನಿರ್ವಹಿಸುತ್ತಿದೆ. ಉಪ ಮಾರುಕಟ್ಟೆಗಳಲ್ಲಿ ಅತಿಹೆಚ್ಚು ವಾರ್ಷಿಕ ಮಾರುಕಟ್ಟೆ ಶುಲ್ಕವನ್ನು ಪಡೆಯುತ್ತಿರುವ ಇದನ್ನು ಸ್ವತಂತ್ರ ಮಾರುಕಟ್ಟೆಯಾಗಿ ಘೋಷಿಸಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದಾರೆ.

ಏಳು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಉಪ ಮಾರುಕಟ್ಟೆ ಸ್ಥಳದಲ್ಲಿ 10 ವ್ಯಾಪಾರಿ ಮಳಿಗೆ ನಿರ್ಮಿಸಲಾಗಿದೆ. 2 ಸಾವಿರ ಚೀಲಗಳ ಸಾಮರ್ಥ್ಯದ ಮೂರು  ಬೃಹತ್ ಗೋದಾಮುಗಳನ್ನು ಹೊಂದಿದೆ.

ಇದುವರೆಗೆ ಮಾರುಕಟ್ಟೆ ಶುಲ್ಕದಿಂದ ವಾರ್ಷಿಕ ₨1.5 ಲಕ್ಷ ಆದಾಯ ಬರುತ್ತಿತ್ತು. ಪ್ರಸ್ತುತ ಕೃಷಿ ಉತ್ಪನ್ನಗಳ ವಹಿವಾಟು ಹೆಚ್ಚಾಗಿರುವುದರಿಂದ ಮತ್ತು ಮೇಲ್ವಿಚಾರಕ ಸುಕ್ಕುರುಸ್ವಾಮಿ ಪರಿಶ್ರಮದಿಂದ ವಾರ್ಷಿಕ ₨10 ಲಕ್ಷದ ವರೆಗೆ ಹೆಚ್ಚಳವಾಗಿದೆ.

ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪ್ತಿಯಲ್ಲಿ ಬರುವ ಕುರುಗೋಡು, ಸಂಡೂರು, ಮೋಕಾ, ಕುಡುತಿನಿ ಮಾರುಕಟ್ಟೆಗಳ ಪೈಕಿ ಇಲ್ಲಿನ ಉಪ ಮಾರುಕಟ್ಟೆ ವಾರ್ಷಿಕ ಅತಿ ಹೆಚ್ಚು ಶುಲ್ಕ ವಸೂಲಿಮಾಡುತ್ತಿದೆ. ಈ ಭಾಗದಲ್ಲಿ ಭತ್ತ, ಮೆಕ್ಕೆಜೋಳ, ಸೂರ್ಯಕಾಂತಿ, ಹತ್ತಿ. ಮೆಣಸಿನಕಾಯಿ ಹೆಚ್ಚಾಗಿ ಬೆಳೆಯುತ್ತಾರೆ. ಸುಗ್ಗಿಯಕಾಲದಲ್ಲಿ ಇವುಗಳ ಖರೀದಿಗೆ ನೆರೆಯ ಜಿಲ್ಲೆಯ ಖರೀದಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇಲ್ಲಿ ಖರೀದಿಸಿದ ಭತ್ತ, ಮೆಣಸಿನಕಾಯಿ, ಮೆಕ್ಕೆಜೋಳವನ್ನು ಹೊರರಾಜ್ಯ ಹಾಗೂ ರಾಜ್ಯದ ಇತರೇ ಜಿಲ್ಲೆಗಳಿಗೆ ಉತ್ಪನ್ನಗಳನ್ನು ರವಾನಿಸುತ್ತಿದ್ದಾರೆ.

ರೈತರ ಹಿತದೃಷ್ಟಿಯಿಂದ ಇಲ್ಲಿನ ಅಧೀನ ಮಾರುಕಟ್ಟೆಯನ್ನು ಸ್ವತಂತ್ರ ಮಾರುಕಟ್ಟೆಯಾಗಿ ಪರಿವರ್ತಿಸಿ ಮಾರುಕಟ್ಟೆಯಲ್ಲಿಯೇ ಖರೀದಿ ವಹಿವಾಟು ನಡೆಸಿದರೆ ಉತ್ತಮ ಬೆಲೆದೊರೆಯುತ್ತದೆ ಎನ್ನುವುದು ರೈತರ ಅಭಿಮತ.

ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ವಿಶೇಷ ತಹಶೀಲ್ದಾರ್, ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಉಪ ಖಜಾನೆ, ಉಪನೊಂದಣಾಧಿಕಾರಿ ಕಚೇರಿ, ವಿವಿಧ ವಾಣಿಜ್ಯ ಬ್ಯಾಂಕ್ ಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ವಾರ್ಷಿಕ ಆದಾಯವನ್ನು ಮೀರಿ ವಾರ್ಷಿಕ ಆದಾಯಹೊಂದಿದೆ. ಇದನ್ನು ಸ್ವತಂತ್ರ ಮಾರುಕಟ್ಟೆಯಾಗಿ ಪರಿವರ್ತಿಸಿದರೆ ರೈತರಿಗೆ ಸಹಕಾರಿ ಯಾಗುವ ಜೊತೆಗೆ ಸರ್ಕಾರಕ್ಕೂ ಆದಾಯದ ಮೂಲವಾಗುತ್ತದೆ ಎಂದು ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಕೆ.ಗಾದಿಲಿಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.