ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 8:30 IST
Last Updated 24 ಜನವರಿ 2012, 8:30 IST

ಸಂಡೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಭ್ರಷ್ಟಾಚಾರ, ದಿನದಿನಕ್ಕೆ ಏರುತ್ತಿರುವ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಜನವಿರೋಧಿ ಧೋರಣೆಯನ್ನು ಖಂಡಿಸಿ ಸೋಷಲಿಸ್ಟ್ ಯೂನಿಟ್  ಸೆಂಟರ್ ಆಫ್ ಇಂಡಿಯಾ  (ಎಸ್‌ಯುಸಿಐ) ಮಾರ್ಚ್ 14ರಂದು ಹಮ್ಮಿಕೊಂಡಿರುವ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಘಟಕ ಸಾರ್ವಜನಿಕರಿಂದ ಸಹಿ ಕಾರ್ಯಕ್ರಮ ನಡೆಸಿತು.

ಶಿಕ್ಷಣ ಮತ್ತು ಆರೋಗ್ಯದ ವ್ಯಾಪಾರೀಕರಣಕ್ಕೆ ಪ್ರೋತ್ಸಾಹ ನೀಡಲು ಖಾಸಗೀಕರಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಇನ್ನೊಂದೆಡೆ ರೈತರ ಭೂ ಕಬಳಿಕೆ, ಮಹಿಳೆಯರ ಮೇಲಿನ ದೌರ್ಜನ್ಯ ನಡೆಯುತ್ತಿದೆ. ಕಾರ್ಮಿಕರು ಮತ್ತು ರೈತರು ಬೀದಿ ಪಾಲಾಗುತ್ತಿದ್ದಾರೆ. ಅವರ ರಕ್ಷಣೆಗಾಗಿ ಎಸ್‌ಯುಸಿಐ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸುತ್ತಿದೆ ಎಂದು ಕಾರ್ಯಕರ್ತರು ಹೇಳಿದರು.

ಕಾರ್ಮಿಕರ ಜೀವನ ಯೋಗ್ಯ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಗುತ್ತಿಗೆ ಪದ್ಧತಿ ಅವರ ಜೀವನವನ್ನೇ ಹಾಳುಗೆಡವಿದೆ. ಅಡುಗೆ ಅನಿಲ, ಪೆಟ್ರೋಲ್ ಸೇರಿದಂತೆ ಎಲ್ಲ ಇಂಧನಗಳ ಬೆಲೆ ಏರುತ್ತಲೇ ಇವೆ. ಆಹಾರ ಧಾನ್ಯಗಳ ಕೈಗೆಟುಕದ ಬೆಲೆ ತಲುಪಿವೆ. ಇದರಿಂದ ಜನಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಬಡ ರೈತರಿಗೆ ಕೃಷಿ ಚಟುವಟಿಕೆ ಕೈಗೊಳ್ಳಲು ಸಬ್ಸಿಡಿ ನೀಡಲು ಹಿಂದೇಟು ಹಾಕುವ ಸರ್ಕಾರ, ಬಂಡವಾಳಶಾಹಿಗಳಿಗೆ ಉತ್ತೇಜಕ ಪ್ಯಾಕೇಜ್ ನೀಡುತ್ತಿರುವುದು ದುರಾದೃಷ್ಟಕರ ಎಂದು ದೂರಿದರು.

ಬೇಡಿಕೆಗಳ ಈಡೇರಿಕೆಗಾಗಿ ಸಂಘಟನೆ ನಿರಂತರ ಹೋರಾಟ ನಡೆಸುತ್ತಿದೆ. ಅಲ್ಲದೆ ರಾಷ್ಟ್ರ ಮಟ್ಟದಲ್ಲಿಯೂ ಪ್ರತಿಭಟನೆ ನಡೆಸಿ, ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಿದೆ ಎಂದು ಎಸ್‌ಯುಸಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಸೋಮಶೇಖರ್ ಹೇಳಿದರು.

ಸಹಿ ಸಂಗ್ರಹಣೆ ಕಾರ್ಯಕ್ರಮದಲ್ಲಿ ಎನ್.ಎಂ. ಮಂಗಳಾ, ಎ. ದೇವದಾಸ್, ಡಾ.ಪ್ರಮೋದ್, ಆರ್. ಶಿವಕುಮಾರ್, ಗುಡೇಕೋಟೆ ನಾಗರಾಜ್, ಟಿ.ಎಂ. ಶಿವಕುಮಾರ್, ಶ್ರೀಶೈಲ, ತಾಜುದ್ದೀನ್ ಉಪಸ್ಥಿತರಿದ್ದರು.ಕೇಂದ್ರ ಸರ್ಕಾರದ ವಿರುದ್ಧ ಸಹಿ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT