ADVERTISEMENT

ಕೋರಂ ಅಭಾವ: ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:15 IST
Last Updated 11 ಮಾರ್ಚ್ 2011, 9:15 IST
ಕೋರಂ ಅಭಾವ: ಮುಂದಕ್ಕೆ
ಕೋರಂ ಅಭಾವ: ಮುಂದಕ್ಕೆ   

ಹೂವಿನಹಡಗಲಿ: ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆಯ ಬೇಕಿದ್ದ ತಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸದಸ್ಯರ ಕೋರಮ್ ಇಲ್ಲದಿದ್ದ ಕಾರಣ ಚುನಾವಣೆಯನ್ನು 11 ಶುಕ್ರವಾರ 10 ಗಂಟೆಗೆ ಮುಂದೂಡಲಾಗಿದೆ ಎಂದು ಹೊಸಪೇಟೆಯ ಸಹಾಯಕ ಆಯುಕ್ತ ಹಾಗೂ ಚುನಾವಣಾ ಅಧಿಕಾರಿ ಕಾಶಿನಾಥ ಪವಾರ್ ಘೋಷಣೆ ಮಾಡಿದರು.

ಗುರುವಾರ ಆರಂಭವಾದ ಮೊದಲ ಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯದಾಗಿದ್ದು ತಾಲ್ಲೂಕು ಪಂಚಾಯಿತಿ ಒಟ್ಟು 15 ಕ್ಷೇತ್ರಗಳಲ್ಲಿ ತಾ.ಪಂ. ಸದಸ್ಯರಾದ ಹುಲುಗಪ್ಪ, ಕವಿತಾ ಹೂಗಾರ ಮತ್ತು ಎ.ಎಂ.ಶಾಂತಯ್ಯ ಮೂರು ಜನ ಮಾತ್ರ ಸಭೆಯಲ್ಲಿ ಹಾಜರಾಗಿದ್ದು ಕೋರಮ್ ಇಲ್ಲದಾಗಿ ಚುನಾವಣೆ ಯನ್ನು ಮುಂದೂಡಲಾಯಿತು ಎಂದು ಅವರು ಹೇಳಿದರು.

ತಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಬಿ.ಹುಲುಗಪ್ಪ, ಎಂ.ಜೆ.ಲಕ್ಷ್ಮಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್. ಮಂಗಳಮ್ಮ ಹಾಲೇಶ್ ನಾಮಪತ್ರ ಸಲ್ಲಿಸಿದ್ದರು. ತಹಸೀಲ್ದಾರ ಬಸವರಾಜ ಸೋಮಣ್ಣನವರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದೇಶ್ವರ ನಾಯ್ಕ ಉಪಸ್ಥಿತರಿದ್ದರು.

ಆಸಕ್ತಿ ಕೆರಳಿಸಿದ ಹಿನ್ನೆಲೆಯಲ್ಲಿ ಚುನಾವಣೆಯ ಸಂದರ್ಭದಲ್ಲಿ ಶಾಸಕ ಚಂದ್ರಾ ನಾಯ್ಕ, ಮಾಜಿ ಸಚಿವ ಈ.ಟಿ.ಶಂಭುನಾಥ,  ಜೊತೆಗೆ ಬಿಜೆಪಿ ಮುಖಂಡರಾದ ತೋಟಾನಾಯ್ಕ, ಜ್ಯೋತಿ ಮಹೇಂದ್ರ, ಪೂಜಪ್ಪ, ಎಂ.ಬಿ.ಬಸವರಾಜ, ಈಶ್ವರಪ್ಪ, ಬಸಣ್ಣ ಹೊಳಲು, ಪ್ರಕಾಶ್, ಕೊಟ್ರಗೌಡ, ಹಾಗೂ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಪರಮೇಶ್ವರಪ್ಪ, ಅರವಳ್ಳಿ ವೀರಣ್ಣ ಹೊರವಲಯದಲ್ಲಿ ಸೇರಿದ್ದರು.

12 ಜನ ಕಾಂಗ್ರೆಸ್ ಸದಸ್ಯರು ಯಾರೂ ಸಭೆಗೆ ಹಾಜರಾಗಲಿಲ್ಲ. ಚುನಾವಣೆಯ ಸಮಯದಲ್ಲಿ  ಸೂಕ್ಷ್ಮ ವಾತಾವರಣ ಉಂಟಾದ ಹಿನ್ನೆಲೆ ಯಲ್ಲಿ  ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.

ಒಂದು ಲಕ್ಷ ಪರಿಹಾರ
ಹೂವಿನ ಹಡಗಲಿ: ಈಚೆಗೆ ತಾಲ್ಲೂಕಿನ ತಳಕಲ್ಲು ಗ್ರಾಮದಲ್ಲಿ ಗುಡಿಸಲಿಗೆ ಆಕಸ್ಮಿಕ ಬೆಂಕಿಯಿಂದ ಸತ್ತ ಮಗು ರಫೀಕ್‌ನ ತಂದೆಗೆ ಕಂದಾಯ ಇಲಾಖೆ ಯಿಂದ ಪ್ರಕೃತಿ ವಿಕೋಪದಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಮೃತ ಪಟ್ಟ ಹಿನ್ನೆಲೆಯಲ್ಲಿ ಒಂದು ಲಕ್ಷ ರೂಪಾಯಿಗಳ ಚೆಕ್ ಅನ್ನು ಶಾಸಕ ಚಂದ್ರಾ ನಾಯ್ಕ ವಿತರಿಸಿದರು.

ಅಂತ್ಯ ಸಂಸ್ಕಾರಕ್ಕೆ ಒಂದು ಸಾವಿರ, ಹಾಗೂ ಕಚ್ಚಾ-ಪಕ್ಕಾ ಮನೆಗಾಗಿ 10 ಸಾವಿರ ಹಾಗೂ ಮನೆಯಲ್ಲಿನ ದವಸ ಧಾನ್ಯ ಸುಟ್ಟು ಹೋದ ಹಿನ್ನೆಲೆಯಲ್ಲಿ 2 ಸಾವಿರ ರೂಪಾಯಿಗಳನ್ನು ನೀಡಲಾಯಿತು.

ಸಹಾಯಕ ಆಯುಕ್ತ ಕಾಶಿನಾಥ,  ತಹಸೀಲ್ದಾರ ಬಸವರಾಜ ಸೋಮಣ್ಣ ನವರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕಾಧಿಕಾರಿ ಸಿದ್ದೇಶ್ವರ ನಾಯ್ಕ, ಜಿಲ್ಲಾ ಪಂಚಾಯಿತಿ ಸದಸ್ಯ ತೋಟಾ ನಾಯ್ಕ, ಜ್ಯೋತಿ ಮಹೇಂದ್ರ ಉಪಸ್ಥಿತರಿದ್ದರು.

ಸೇನಾ ನೇಮಕಾತಿ ರ್ಯಾಲಿ ಮೇ 2ರಿಂದ
ಬಳ್ಳಾರಿ: ಬೆಳಗಾವಿಯ ಆರ್ಮಿ ರಿಕ್ರೂಟಿಂಗ್ ಕಚೇರಿಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಬೆಳಗಾವಿ ಯಲ್ಲಿ ಮೇ 2ರಿಂದ 11ರವರೆಗೆ ರ್ಯಾಲಿ ನಡೆಯಲಿದೆ.
ಬಳ್ಳಾರಿ, ಬೆಳಗಾವಿ, ಧಾರವಾಡ, ಬೀದರ್, ರಾಯಚೂರು, ಕೊಪ್ಪಳ, ಗದಗ, ಹಾವೇರಿ, ಗುಲ್ಬರ್ಗ, ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗವಹಿಸಬಹುದು. ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್, ಸೋಲ್ಜರ್ ಕಕ್‌ರ್ಲ್/ ಸ್ಟೋರ್ ಕೀಪರ್ ಟೆಕ್ನಿಕಲ್, ಸೋಲ್ಜರ್ ಟ್ರೇಡ್ಸ್‌ಮನ್, ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗಾಗಿ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.