ADVERTISEMENT

ಗಡಿಯಲ್ಲಿ ಒಂದರಂದು ಕನ್ನಡ ಧ್ವಜಾರೋಹಣ: ಎಂಡಿಬಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 5:25 IST
Last Updated 8 ಅಕ್ಟೋಬರ್ 2011, 5:25 IST

ಬಳ್ಳಾರಿ: ರಾಜ್ಯದ ಗಡಿಯನ್ನು  ಧ್ವಂಸಗೊಳಿಸಿ ಒತ್ತುವರಿ ಮಾಡ ಲಾಗಿದೆ ಎಂಬುದು ಸಿಬಿಐ, ಸಿಇಸಿ ಹಾಗೂ ಲೋಕಾಯುಕ್ತ ವರದಿಯಲ್ಲಿ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ಒತ್ತುವರಿ ಮಾಡಿದ ಗಡಿ ಪ್ರದೇಶದಲ್ಲಿ ನವೆಂಬರ್ 1ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವದ ಸಂದರ್ಭ ಕನ್ನಡ ಧ್ವಜಾರೋಹಣ ನೆರವೇರಿಸ ಲಾಗುವುದು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಂ. ದಿವಾಕರ ಬಾಬು ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದ ಗಡಿ ಭಾಗದಲ್ಲಿರುವ ತುಮಟಿ, ವಿಠ್ಠಲಪುರ ಹಾಗೂ ಮಲಪನಗುಡಿ ಪ್ರದೇಶದ ಬಳಿ ಅಂದು ಬೆಳಗ್ಗೆ 7ಕ್ಕೆ ಕನ್ನಡದ ಧ್ವಜಾರೋಹಣ ನೆರವೇರಿಸಲಾಗು ವುದು ಎಂದರು.

ಅಕ್ರಮವಾಗಿ ಗಡಿ ಒತ್ತುವರಿ, ಗಡಿ ನಾಶ ಮಾಡಿದವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷ ಈ ಹಿಂದೆಯೇ ಹೋರಾಟ ನಡೆಸಿತ್ತು. ಈ ಕುರಿತು ವರದಿಯಲ್ಲಿ ಉಲ್ಲೇಖಿಸಿ ರುವುದು ಪಕ್ಷದಿಂದ ನಡೆಸಿದ್ದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಗಡಿ ಒತ್ತುವರಿ ಮಾಡಿ, ಅರಣ್ಯ ನಾಶಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅಂದಿನ ಕಂದಾಯ ಸಚಿವರು ಹಾಗೂ ಅಧಿಕಾರಿಗಳು ಕಾರಣರಾಗಿದ್ದಾರೆ. ರೆಡ್ಡಿ ಸಹೋದರರು ಸ್ವಯಂ ಹಿತಾಸಕ್ತಿಗಾಗಿ ರಾಜ್ಯದ ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತನ್ನು ವಶಕ್ಕೆ ತೆಗೆದುಕೊಂಡು, ಕೊಳ್ಳೆಹೊಡೆದಿದ್ದಾರೆ. ಇದರಲ್ಲಿ ಅರಣ್ಯ, ಪೊಲೀಸ್ ಮತ್ತಿತರ ಅಧಿಕಾರಿಗಳು ಸೇರಿದ್ದಾರೆ ಎಂದು ಅವರು ಆರೋಪಿಸಿದರು.

ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತರು ಸಲ್ಲಿಸಿರುವ ವರದಿಯನ್ನು ಸರ್ಕಾರ ಕೂಡಲೇ ಒಪ್ಪಿಕೊಳ್ಳಬೇಕು. ಕೇವಲ ಅಧಿಕಾರಿ ಗಳನ್ನು ಅಮಾನತು ಮಾಡಿದರೆ ಉಪಯೋಗ ಇಲ್ಲ. ಬದಲಿಗೆ, ಅಂಥವರನ್ನು ಬಂಧಿಸಿ ಜೈಲಿಗೆ ಕಳುಹಿಸ ಬೇಕು. ಅಕ್ರಮದಲ್ಲಿ ಭಾಗಿಯಾಗಿರು ವವರು ಹೊರಗೆ ಇದ್ದರೆ ಸಾಕ್ಷ್ಯಾಧಾರ ನಾಶಪಡಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೊದಲು ಅವರನ್ನೆಲ್ಲ ಬಂಧಿಸಿ ನಂತರ ತನಿಖೆ ನಡೆಸಬೇಕು ಎಂದು ಬಾಬು ಕೋರಿದರು.

ತಪ್ಪಿತಸ್ಥರ ವಿರುದ್ಧ  ಕ್ರಮ ಕೈಗೊಳ್ಳಲು ನವೆಂಬರ್ 10ರವರೆಗೆ ಗಡುವು ನೀಡಲಾಗುವುದು. ಒಂದು ವೇಳೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳ ದಿದ್ದರೆ, ಕಾಂಗ್ರೆಸ್ ಪಕ್ಷದಿಂದ ಜಿಲ್ಲೆಯಾ ದ್ಯಂತ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ರೆಡ್ಡಿ ಸಹೋದರರಿಂದ ಒಂದು ಲಕ್ಷ ಕೋಟಿ ರೂಪಾಯಿಗೂ ಅಧಿಕ ನಷ್ಟ ಸರ್ಕಾರಕ್ಕಾಗಿದೆ. ಇದರಲ್ಲಿ ಕಂದಾಯ, ಅರಣ್ಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದು, ಅವರನ್ನೂ ಬಂಧಿಸಬೇಕು. ಅಕ್ರಮ ಗಣಿಗಾರಿಕೆ ಯಿಂದ ಸಂಪಾದಿಸಿರುವ ಎಲ್ಲರ ಆಸ್ತಿಯನ್ನೂ ಮುಟ್ಟುಗೋಲು ಹಾಕಿ ಕೊಳ್ಳಬೇಕು ಎಂದು ಒತ್ತಾಯಿಸಿದರು. ಎಸ್.ಎಂ. ಮಹಮ್ಮದ್, ಅರ್ಜುನ್, ಗೋಪಿನಾಥ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.