ADVERTISEMENT

ಗಣಿಗಾರಿಕೆ: ಎಸ್‌ಬಿ ಮಿನರಲ್ಸ್ ಪರ ಹೈಕೋರ್ಟ್ ತೀರ್ಪು

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 4:30 IST
Last Updated 12 ಜನವರಿ 2012, 4:30 IST

ಹೊಸಪೇಟೆ: ಎಸ್‌ಬಿ ಮಿನರಲ್ಸ್ ವಿರುದ್ಧ  ಎಂಎಸ್‌ಪಿಎಲ್ ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಗಣಿ ಗಡಿ ಒತ್ತವರಿ ಅರ್ಜಿ ವಜಾಗೊಂಡಿದೆ.

ಸುಪ್ರಿಂ ಕೋರ್ಟ್ ನಿರ್ದೇಶನದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ರಾಮಮೋಹನ್‌ರೆಡ್ಡಿ ಅವರು ಬುಧವಾರ ರಾಜ್ಯ ಹೈಕೋರ್ಟ್‌ನಲ್ಲಿ ಎಂಎಸ್‌ಪಿಎಲ್ ಸಲ್ಲಿಸಿದ್ದ ಪ್ರಕರಣದ ತೀರ್ಪು ಪ್ರಕಟಿಸಿ, ಎಸ್‌ಬಿ ಮಿನರಲ್ಸ್ ಗಡಿಯೊಳಗೆ ಬಂದು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ಆರೋಪ ಸುಳ್ಳು ಎಂದು ಹೇಳಿದರು.

ಗಣಿಗಾರಿಕೆಗಾಗಿ ವ್ಯಾಸನಕೆರೆ ಬಳಿ ಎಸ್‌ಬಿ ಮಿನರಲ್ಸ್‌ಗೆ  200 ಎಕರೆ ಮಂಜೂರಾಗಿದ್ದು, ಪಕ್ಕದಲ್ಲಿಯೇ ಎಂಎಸ್‌ಪಿಎಲ್ ಗಣಿಗಾರಿಕೆಗಾಗಿ 850 ಎಕರೆ ಪ್ರದೇಶವನ್ನು ಗುತ್ತಿಗೆ ಪಡೆದಿತ್ತು. 2009ರಿಂದ ಗಡಿ ಒತ್ತುವರಿ ಮಾಡಿ, ಗಣಿಗಾರಿಕೆ ನಡೆಸುತ್ತದೆ ಎಂದು ಎಂಎಸ್‌ಪಿಎಲ್ ಆಪಾದಿಸಿತ್ತು. ಸ್ಥಳೀಯ ನ್ಯಾಯಾಲಯದಲ್ಲಿ ಸೋಲುಂಡ ಎಂಎಸ್‌ಪಿಎಲ್, ಹೈಕೋರ್ಟ್ ಮೊರೆ ಹೋಗಿತ್ತು.

ರಾಜ್ಯ ಹೈಕೋರ್ಟ್‌ನಲ್ಲಿಯೇ ಇದನ್ನು ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿ ನ್ಯಾಯಮೂರ್ತಿ ರಾಮಮೂರ್ತಿ ಅವರನ್ನು ವಿಚಾರಣೆ ನಡೆಸಲು ಆದೇಶಿಸಿತ್ತು. ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಸ್‌ಪಿಎಲ್ ಕಂಪನಿಯು ಸಮರ್ಪಕ ದಾಖಲೆಗಳನ್ನು ನೀಡಿಲ್ಲವಾದ್ದರಿಂದ ಆರೋಪ ಸುಳ್ಳು ಎಂದು ತೀರ್ಪು ನೀಡಿ ಎಸ್‌ಬಿ ಮಿನರಲ್ಸ್ ನ್ಯಾಯಾಲಯದ ಖರ್ಚನ್ನು ಎಂಎಸ್‌ಪಿಎಲ್ ಭರಿಸುವಂತೆಯೂ ಆದೇಶಿಸಿದೆ. ಎಸ್‌ಬಿ ಮಿನರಲ್ಸ್ ಪರವಾಗಿ ಹಿರಿಯ ವಕೀಲ ಡಿ.ಎಲ್.ಎನ್. ರಾವ್ ಹಾಗೂ ಅನಂತ ಮಂಡಿಗಿ ವಾದ ಮಂಡಿಸಿದ್ದರು.

ಹರ್ಷ: ನ್ಯಾಯ ಮಾರ್ಗದಲ್ಲಿಯೇ ನಡೆಯುವ ತಮ್ಮ ಸಂಸ್ಥೆಯ ವಿರುದ್ಧ ಅನಗತ್ಯವಾಗಿ ಆರೋಪ ಹೊರೆಸಲಾಗಿತ್ತು. ಅಂತಿಮವಾಗಿ ನ್ಯಾಯಕ್ಕೆ ಜಯವಾಗಿದೆ ಎಂದು ಶಾಸಕ ಆನಂದಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.
`ನಮ್ಮ ಹಾಗೂ ನಮ್ಮ ಸಂಸ್ಥೆಯ ತೇಜೋವಧೆ ಮಾಡುವುದು ಎಂಎಸ್‌ಪಿಎಲ್ ಮೂಲ ಉದ್ದೇಶವಾಗಿದ್ದರೂ ಅಂತಿಮವಾಗಿ ನ್ಯಾಯಾಲಯ ನ್ಯಾಯ ಒದಗಿಸಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.