ಬಳ್ಳಾರಿ: ಜಿಲ್ಲೆಯಲ್ಲಿರುವ ಉಕ್ಕಿನ ಕಾರ್ಖಾನೆಗಳ ಮಾಲೀಕರಿಗೆ ಸುಲಭವಾಗಿ ಅದಿರು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗಣಿ ಗುತ್ತಿಗೆಗೆ ಅನುಮತಿ ನೀಡಬೇಕು ಅಂದು ಜೆಎಸ್ಡಬ್ಲೂ ಸ್ಟೀಲ್ಸ್ ಕಂಪೆನಿಯ ಸಿಇಒ ಡಾ.ವಿನೋದ್ ನೋವಲ್ ಮನವಿ ಮಾಡಿದರು.
ಜಿಲ್ಲೆಯ ತೋರಣಗಲ್ನಲ್ಲಿರುವ `ಟೀಮ್ ಓರ್' ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಪ್ರಾದೇಶಿಕ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕೈಗಾರಿಕೋದ್ಯಮಿಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದು, ಮೂಲಸೌಲಭ್ಯಗಳ ಕೊರತೆ, ತರಬೇತಿ ಹೊಂದಿದ ಮಾನವ ಸಂಪನ್ಮೂಲ ಅಲಭ್ಯತೆ ಹಾಗೂ ಆಡಳಿತಾತ್ಮಕ ತೊಂದರೆಗಳಿವೆ ಎಂದರು. ಹಣಕಾಸಿನ ಸೌಲಭ್ಯ ಹಾಗೂ ಅಗತ್ಯ ಅದಿರು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಕಾರ್ಖಾನೆಗಳ ಬೆಳವಣಿಗೆಗೆ ನೆರವು ನೀಡುವ ನಿಟ್ಟಿನಲ್ಲಿ ರಸ್ತೆ ಸೌಲಭ್ಯ ಹಾಗೂ ರೈಲು ಸಂಪರ್ಕ ಒದಗಿಸಲು ಸರ್ಕಾರವು ಆಲೋಚಿಸಬೇಕು ಎಂದು ಅವರು ಹೇಳಿದರು.
ನೂತನವಾಗಿ ಕೈಗಾರಿಕೆಗಳು ಆರಂಭವಾಗಲು ಅಗತ್ಯವಿರುವ ಪರಿಸರ ಇಲಾಖೆಯ ಪರವಾನಗಿಯು ತ್ವರಿತವಾಗಿ ಸಿಗಬೇಕು ಎಂದ ಅವರು ಆಡಳಿತಾತ್ಮಕ ಪರವಾನಗಿಯು ಆದಷ್ಟು ಶೀಘ್ರದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕಿದೆ ಎಂದರು. ವಾರ್ಷಿಕವಾಗಿ ಕೇವಲ 30 ದಶಲಕ್ಷ ಮೆಟ್ರಿಕ್ ಟನ್ ಅದಿರು ಗಣಿಗಾರಿಕೆಗೆ ಮಾತ್ರ ಅವಕಾಶ ನೀಡಿರುವ ಸುಪ್ರೀಂ ಕೋರ್ಟ್ನ ಆದೇಶದಿಂದಾಗಿ ಈ ಭಾಗದ ಕೈಗಾರಿಕೆಗಳಿಗೆ ಇನ್ನೂ ಹತ್ತು ದಶಲಕ್ಷ ಟನ್ ಅದಿರಿನ ಕೊರತೆ ಉಂಟಾಗಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಇ- ಹರಾಜು ಮೂಲಕ ಒದಗಿಸುತ್ತಿರುವ ಅದಿರಿನ ದರವು ಅಂತರ ರಾಷ್ಟ್ರೀಯ ಮಾರುಕಟ್ಟೆಗಿಂತ ಶೇ 20ರಷ್ಟು ಅಧಿಕವಾಗಿದೆ. ಇದರಿಂದಾಗಿ ಸ್ಥಳೀಯ ಉದ್ಯಮಿಗಳು ಮಾರುಕಟ್ಟೆಯಲ್ಲಿನ ಕೊರತೆಯನ್ನು ಎದುರಿಸಲು ಪರದಾಡುವಂತಾಗಿದೆ. ಆದ್ದರಿಂದ ಈ ದರವನ್ನು ಕೂಡಲೇ ಕಡಿಮೆಗೊಳಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ದಕ್ಷಿಣ ರೈಲ್ವೆ ವಲಯದ ಅಧಿಕಾರಿ (ಸಿಟಿಪಿಎಂ) ಎನ್. ಶ್ರೀನಿವಾಸ್, ಎಸ್ಬಿಐ ಕ್ಯಾಪಿಟಲ್ ಮಾರ್ಕೆಟ್ನ ವೇದವ್ಯಾಸರಾವ್, ಮೋತಿಲಾಲ್ ಓಸ್ವಾಲ್ ಸೆಕ್ಯೂರಿಟಿ ಗ್ರೂಪ್ನ ಸಂಜಯ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.