ADVERTISEMENT

ಗ್ರಾ.ಪಂ. ಸದಸ್ಯರನ್ನು ಕೂಡಿ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 4:40 IST
Last Updated 1 ಅಕ್ಟೋಬರ್ 2012, 4:40 IST

ಹೂವಿನಹಡಗಲಿ: ತಾಲ್ಲೂಕಿನ ನಾಗತಿಬಸಾಪುರ ಗ್ರಾಮದಲ್ಲಿ ಕುಡಿಯುವ ನೀರು, ವಿದ್ಯುತ್ ಹಾಗೂ ಸ್ವಚ್ಛತೆಯನ್ನು ಕಾಪಾಡುವಲ್ಲಿ ವಿಫಲವಾಗಿರುವುದನ್ನು ಖಂಡಿಸಿ ನಾಗತಿಬಸಾಪುರ ಗ್ರಾಮ ಪಂಚಾಯಿತಿಯ ಆರು ಜನ ಸದಸ್ಯರನ್ನು ಗ್ರಾಮದ ಯುವಕರು ಹಾಗೂ ಮುಖಂಡರು ಪಂಚಾಯಿತಿಯಲ್ಲಿ ಶನಿವಾರ ಸಂಜೆ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು.

ಸದಸ್ಯರಾದ ಎಕೆ ಹಾಲೇಶ, ಬೋವಿ ತಿಪ್ಪೇಶ, ಪೀರಸಾಹೇಬ, ಬೋವಿ ಆನಂದ, ಮಡಿವಾಳರ ಜಯಮ್ಮ, ಎಕೆ.ರತ್ನಮ್ಮ ಅವರನ್ನು ಪಂಚಾಯಿತಿಯಲ್ಲಿ ಕೂಡಿಹಾಕಿದ್ದರು.

ಗ್ರಾಮ ಪಂಚಾಯಿತಿಯ ಯಾವ ಸದಸ್ಯರೂ ಗ್ರಾಮದ ಅಭಿವೃದ್ಧಿಯ ಬಗ್ಗೆ ಕಾಳಜಿಯಿಲ್ಲ ಕೇವಲ ಹಣ ಮಾಡಿ ಕೊಳ್ಳುವುದೇ ಇವರ ಕೆಲಸವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು ಯಾವೊಬ್ಬ ಸದಸ್ಯನೂ ಗ್ರಾಮದ ಬಗ್ಗೆ ಯೋಚನೆ ಮಾಡುವುದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ದಿಯ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ವಿನಾಕಾರಣ ಕಾಲಹರಣ ಮಾಡುತ್ತಾರೆ ಎಂದು ಅವರು ದೂರಿದರು.

ಇಂದಿರಾ ಆವಾಸ್ ಮನೆಗಳನ್ನು ತಮ್ಮ ಸಂಬಂಧಿಕರಿಗೆ ಹಾಗೂ ಯಾರು ಹಣವನ್ನು ಕೊಡುತ್ತಾರೋ ಅವರಿಗೆ ಮನೆಗಳನ್ನು ಮಾಡಿಕೊಡುತ್ತಾರೆ. ಹೀಗಾಗಿ ಸದಸ್ಯರನ್ನು ಕೂಡಿಹಾಕಿದ್ದೆೀವೆ ಎಂದು ಯುವಕರು ಹಾಗೂ ಗ್ರಾಮದ ಮುಖಂಡರು ಹೇಳಿದರು.

ವಿದ್ಯುತ್ ಅಭಾವ ಹಾಗೂ ಗ್ರಾಮದಲ್ಲಿ ಹಳೆಯ ವಿದ್ಯುತ್ ಕಂಬಗಳ ದುರಸ್ತಿಗಾಗಿ ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ಅಧಿಕಾರಿ ಪ್ರಕಾಶ ಅವರನ್ನು ಪಂಚಾಯಿತಿಯಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಹಳೆಯ ಕಂಬಗಳನ್ನು ಬದಲಾಯಿಸಿ ದುರಸ್ತಿ ಮಾಡುವ ಭರವಸೆಯನ್ನು ನೀಡಿದ ಅಧಿಕಾರಿಯನ್ನು ಬಿಡಲಾಯಿತು.

ಹುಗಲೂರು ನಾಗರಾಜ, ಜಿ.ನಾಗರಾಜ, ಗಿರಿರಾಜ ಹಾಲಸ್ವಾಮಿಗಳು, ಕೆ.ಜಗನ್ನಾಥ, ಸೋಮಶೇಖರ, ಎ. ಮುದಿಮಲ್ಲಪ್ಪ, ಎಸ್.ಪ್ರಭಾಕರ, ವೀರೇಶ್,  ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶಗೌಡ ಹಾಗೂ ಯುವಕರು, ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.