ADVERTISEMENT

ಚುನಾವಣೆ ಬಿಗಿ ಭದ್ರತೆ: ಅರೆ ಸೇನಾಪಡೆ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 5:35 IST
Last Updated 24 ಏಪ್ರಿಲ್ 2013, 5:35 IST

ಹಗರಿಬೊಮ್ಮನಹಳ್ಳಿ: ಮುಕ್ತ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ನಿಯೋಜಿಸಲಾಗಿರುವ ಅರೆಸೇನಾ ಪಡೆ ಸಿಬ್ಬಂದಿ ಪಟ್ಟಣಕ್ಕೆ ಆಗಮಿಸಿದ್ದು, ಭಾನುವಾರ ಮುಖ್ಯ ರಸ್ತೆಗಳಲ್ಲಿ ಸೌಹಾರ್ದ ನಡಿಗೆಯಲ್ಲಿ ಪಾಲ್ಗೊಂಡರು.

ಪಟ್ಟಣದ ಬಸವೇಶ್ವರ ಬಜಾರ್ ಸಹಿತ ರಾಮನಗರ, ಸೋನಿಯಾನಗರ, ರಾಮರಹೀಮ್ ನಗರ, ಅರಳಿಹಳ್ಳಿ, ಕುರದಗಡ್ಡಿ ಮತ್ತು     ಹಳೇ ಹಗರಿಬೊಮ್ಮನಹಳ್ಳಿಯ ಎಲ್ಲಾ ಬಡಾವಣೆಗಳ ಮುಖ್ಯ ರಸ್ತೆಗಳಲ್ಲಿ ಸೌಹಾರ್ದ ನಡಿಗೆ ನಡೆಸಿದರು.

ಇಲ್ಲಿನ ಪೊಲೀಸ್ ಠಾಣೆ ಬಳಿ ಸೌಹಾರ್ದ ನಡಿಗೆಗೆ ಚಾಲನೆ ನೀಡಿ ತಾವೂ ಹೆಜ್ಜೆ ಹಾಕಿದ ಎಎಸ್‌ಪಿ ಕಾರ್ತಿಕ್‌ರೆಡ್ಡಿ ಮಾತನಾಡಿ, ಮೇ 5ರಂದು ನಡೆಯಲಿರುವ ಹಗರಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಜನರಲ್ಲಿನ ಅಭದ್ರತೆಯ ವಾತಾವರಣ ದೂರ ಮಾಡಲು ಅರೆ ಸೇನಾ ಪಡೆಯ ಒಟ್ಟು 102 ಸಿಬ್ಬಂದಿ ಯನ್ನು ಭದ್ರತೆಗಾಗಿ ನಿಯೋಜಿಸಲಾ ಗಿದೆ ಎಂದು ತಿಳಿಸಿದರು.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ತಾಲ್ಲೂಕು ಆಡಳಿತ ಸಂಕಲ್ಪ ಮಾಡಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಬೆಂಬಲ ನೀಡಬೇಕು. ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ನಡೆಸುವ ಅಕ್ರಮ ಮದ್ಯ ದಾಸ್ತಾನು, ಭೋಜನ ಕೂಟ, ಹಣ ಹಂಚಿಕೆ ಮತ್ತು ಯಾವುದೇ ಆಮಿಷ ಒಡ್ಡುವಿಕೆಯಂತಹ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಕೂಡಲೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡ ಬೇಕು ಎಂದು ಮನವಿ ಮಾಡಿ ಕೊಂಡರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ನಾಗರಾಜ್ ಮತ್ತು ಪಟ್ಟಣದ ಠಾಣೆಯ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.