ADVERTISEMENT

ಜಿಲ್ಲೆಯ ಹಲವೆಡೆ ಉತ್ತಮ ಮಳೆ

ಗುಡುಗು ಸಿಡಿಲಿನ ಆರ್ಭಟಕ್ಕೆ ಬೆಚ್ಚಿದ ಜನ; ತುಂಬಿ ಹರಿದ ಹಳ್ಳ, ಕೆರೆಗೆ ನೀರು

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 11:34 IST
Last Updated 3 ಜೂನ್ 2018, 11:34 IST

ಬಳ್ಳಾರಿ: ನಗರದಲ್ಲಿ ಶುಕ್ರವಾರ ತಡ ರಾತ್ರಿ 2 ಗಂಟೆಯ ವೇಳೆಗೆ ಭಾರಿ ಗಾಳಿ ಬೀಸಿ, ಕೆಲ ಕಾಲ ಮಳೆ ಸುರಿಯಿತು. ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆ ಪಕ್ಕದ ಬೇವಿನ ಮರದ ದೊಡ್ಡ ಕೊಂಬೆ ಗಾಳಿಯ ರಭಸಕ್ಕೆ ಮುರಿದು ಬಿತ್ತು. ಗುಡುಗು–ಸಿಡಿಲಿನಿಂದ ಕೂಡಿದ ಮಳೆಗೆ ಶನಿವಾರ ವಾತಾವರಣ ತಂಪಾಗಿತ್ತು.

ಕೊಟ್ಟೂರು ಕೆರೆ ಭರ್ತಿ

ಕೊಟ್ಟೂರು: ತಾಲ್ಲೂಕಿನಾದ್ಯಾಂತ ಶುಕ್ರವಾರ ರಾತ್ರಿ 2 ಗಂಟೆಗೆ ಭಾರಿ ಸಿಡಿಲು, ಗುಡುಗು, ಗಾಳಿ ಆರ್ಭಟದೊಂದಿಗೆ ಉತ್ತಮ ಮಳೆಯಾಗಿದೆ. ಗಾಳಿ–ಮಳೆ ರಭಸಕ್ಕೆ ದೊಡ್ಡ ಮತ್ತು ಸಣ್ಣ ಮರಗಳು ಉರುಳಿ ಬಿದ್ದಿವೆ. ಆದರೆ, ಯಾವುದೇ ಅನಾಹುತದ ವರದಿ ಆಗಿಲ್ಲ. ಮಳೆಯಿಂದ ರಸ್ತೆಗಿಂತ ತಗ್ಗಿನಲ್ಲಿರುವ ಕೊಟ್ಟೂರು ಬಸ್ ನಿಲ್ದಾಣಕ್ಕೆ ನೀರು ನುಗ್ಗಿ ಅದು ಕೆರೆಯಂತಾಗಿತ್ತು. ಇದರಿಂದ ಬಸ್‍ಗಳೆಲ್ಲಾ ಹೊರಗಡೆ ನಿಲ್ಲುವುದು ಅನಿವಾರ್ಯವಾಗಿತ್ತು.

ADVERTISEMENT

ಜರಿಮಲಿ, ಬಸಾಪುರ, ಉಜ್ಜಯಿನಿ ಭಾಗಗಳಲ್ಲಿ ಭಾರಿ ಮಳೆ ಆಗಿದ್ದರಿಂದ ರಾಂಪುರ, ಚಿರಿಬಿ, ಜಾಗಟಗೇರಿ ಹಳ್ಳಗಳು ಭರ್ತಿಯಾಗಿ ಹರಿದಿವೆ. ಕೊಟ್ಟೂರು ಕೆರೆ ಮೈದುಂಬಿಕೊಂಡಿದೆ.

ಈ ಮುಂಚೆ ರೋಹಿಣಿ ಮಳೆ ಕೊರತೆಯಿಂದ ರೈತರು ಜೋಳ ಬೆಳೆಯುವುದನ್ನು ಬಿಟ್ಟಿದ್ದರು. ಆದರೆ, ಈ ವರ್ಷ ರೋಹಿಣಿ ಮಳೆ ಬಿದ್ದಿರುವು
ದರಿಂದ ಹೆಚ್ಚಿನ ರೈತರು ಜೋಳ ಬಿತ್ತನೆ ಮಾಡುತ್ತಿದ್ದಾರೆ. ಖಾಸಗಿ ಬೀಜ ಮಾರಾಟ ಅಂಗಡಿಗಳಲ್ಲಿ ಸದ್ಯಕ್ಕೆ ಜೋಳ, ಈರುಳ್ಳಿಯ ಬಿತ್ತನೆ ಬೀಜ ಹೆಚ್ಚು ಮಾರಾಟವಾಗಿದೆ.

ಕೂಡ್ಲಿಗಿ: ಉತ್ತಮ ಮಳೆ

ಕೂಡ್ಲಿಗಿ: ತಾಲ್ಲೂಕಿನಾದ್ಯಂತೆ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಬಹುತೇಕ ಕಡೆ ಹಳ್ಳಗಳು ತುಂಬಿ ಹರಿದಿವೆ. ಆದರೆ, ಯಾವುದೇ  ಅವಘಡ ನಡೆದ ವರದಿಯಾಗಿಲ್ಲ.

ರಾತ್ರಿ ಸುಮಾರು 12.30ಕ್ಕೆ ಸಿಡಿಲು ಗುಡುಗಿನೊಂದಿಗೆ ಮಳೆ ಆರಂಭವಾಗಿ, ಒಂದು ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಇದರಿಂದ ತಾಲ್ಲೂಕಿನ ಕ್ಯಾಸನಕೆರೆ, ಚೌಡಾಪುರ, ಮೊರಬ, ಅಗ್ರಹಾರ ಗ್ರಾಮಗಳಲ್ಲಿ ಮಳೆಯಿಂದ ಹಳ್ಳಗಳು ತುಂಬಿ ಹರಿದಿದ್ದು, ಈ ಭಾಗದ ಕೆರೆಗಳು ತುಂಬಿವೆ.

ಬಣವಿಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದರಿ 50ರಲ್ಲಿ ಸೇತುವೆ ನಿರ್ಮಾಣಕ್ಕೆ ತೋಡಿದ ಗುಂಡಿಯಲ್ಲಿ ನೀರು ತುಂಬಿಕೊಂಡಿದೆ. ಗುಡೇಕೋಟೆ ಹಾಗೂ ಹೊಸಹಳ್ಳಿ ಹೋಬಳಿಗಳಲ್ಲಿಯೂ ಉತ್ತಮ ಮಳೆಯಾಗಿದೆ. ಹೊಸಹಟ್ಟಿ ಗ್ರಾಮದಲ್ಲಿ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.