ಹೊಸಪೇಟೆ: ದೆಹಲಿಯ ಹೈಕೋರ್ಟ್ ಮುಂದೆ ನಡೆದ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಐತಿಹಾಸಿಕ ಹಂಪಿ ಸೇರಿದಂತೆ ತುಂಗಭದ್ರಾ ಜಲಾಶಯಕ್ಕೂ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ.
ದೇಶ-ವಿದೇಶಗಳಿಂದ ಬರುವ ಪ್ರವಾಸಿಗರಲ್ಲಿ ಅಭದ್ರತೆಯನ್ನು ಸೃಷ್ಟಿಸುವ ಸಂಚು ರೂಪಿಸಿದ್ದಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳನ್ನು ಉಗ್ರರು ಪ್ರಮುಖ ಗುರಿ ಯಾಗಿಸಿದ್ದಾರೆ ಎಂಬ ಮಾಹಿತಿಯಂತೆ ದೆಹಲಿಯ ಹೈಕೋರ್ಟ್ ಬಳಿ ಬಾಂಬ್ ಸ್ಫೋಟ ನಡೆಯುತ್ತಿದ್ದಂತೆ ಇಂತಹ ಸ್ಥಳಗಳನ್ನು ರಕ್ಷಿಸಲು ಮುಂದಾಗಿದ್ದು ಐತಿಹಾಸಿಕ ಪ್ರವಾಸಿ ತಾಣ ಹಂಪಿ ಹಾಗೂ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಕೆಲ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ವ್ಯಾಪಕ ಭದ್ರತೆಯನ್ನು ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಎದುರು ಬಸವಣ್ಣ ಬಳಿಯ ಸಾಲು ಮಂಟಪ. ಕಮಲ್ಮಹಲ್, ಆನೆ ಮತ್ತು ಒಂಟೆಗಳ ಲಾಯ, ಮಹಾನವಮಿ ದಿಬ್ಬ, ರಾಣಿಯರ ಸ್ನಾನ ಗೃಹ ಸೇರಿದಂತೆ ಮಹತ್ವದ ಸ್ಮಾರಕಗಳ ಸ್ಥಳಗಳಲ್ಲಿ ಶ್ವಾನದಳದಿಂದ ಪರಿಶೀಲನೆ ಮತ್ತು ಹೆಚ್ಚಿನ ಸಿಬ್ಬಂದಿ ನಿಯೋಜನೆಯೊಂದಿಗೆ ಬಂದೋಬಸ್ತ್ ನೀಡಿದೆ.
ಅಂತೆಯೇ ತುಂಗಭದ್ರಾ ಜಲಾಶಯದ ಎಲ್ಲೆಡೆ ಹೆಚ್ಚಿನ ಸಿಬ್ಬಂದಿ ಮತ್ತು ಜಲಾಶಯದ ಪ್ರವೇಶ ದ್ವಾರದಲ್ಲಿ ಖಾಸಗಿ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣೆ ಮಾಡುವ ಮೂಲಕ ಹೆಚ್ಚಿನ ರಕ್ಷಣೆಗೆ ಮುಂದಾಗಿದೆ.
ಮತ್ತೊಂದೆಡೆ ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಂಚಾರಿ ದಳ ತೀವ್ರ ನಿಗಾ ವಹಿಸುವಂತೆ ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.