ಹೂವಿನಹಡಗಲಿ : ತೊಗರಿ ಸೇರಿದಂತೆ ದ್ವಿದಳ ಧಾನ್ಯಗಳನ್ನು ಮಿಶ್ರಬೆಳೆ ಪದ್ಧತಿಯಲ್ಲಿ ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಳವಾಗುತ್ತದೆ ಎಂದು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಚಂದ್ರಕಾಂತ ಕಾಲಿಬಾವಿ ಹೇಳಿದರು.
ತಾಲ್ಲೂಕಿನ ಮುದೇನೂರು ಗ್ರಾಮದ ರೈತ ಎಸ್.ಎಂ. ಜಾನ್ ಅವರ ಜಮೀನಿನಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಆಯೋಜಿಸಿದ್ದ ತೊಗರಿ ಬೆಳೆ ಕ್ಷೇತ್ರೋತ್ಸವ, ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಮಿಶ್ರಬೆಳೆಯಲ್ಲಿ ದ್ವಿದಳ ಧಾನ್ಯ ಬೆಳೆಯುವುದರಿಂದ ಮುಖ್ಯಬೆಳೆಗೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಮನುಷ್ಯನ ಆಹಾರ ಪದ್ಧತಿಯಲ್ಲಿ ತೊಗರಿ ಬೇಳೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅಧಿಕ ಇಳುವರಿ ತರುವ ಆಶಾ ತಳಿಯ ತೊಗರಿಯನ್ನು ರೈತರು ಬೆಳೆಯಬೇಕು. ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ದೊರೆಯುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೀಟ ತಜ್ಞ ಹನುಮಂತಪ್ಪ ಶ್ರೀಹರಿ ಮಾತನಾಡಿ, ರೋಗ ನಿರೋಧಕ ಶಕ್ತಿ ಹೊಂದಿರುವ ಹೊಸ ತಾಂತ್ರಿಕತೆಯ ಬಿತ್ತನೆ ಬೀಜಗಳನ್ನು ಆಯ್ಕೆ ಮಾಡಿಕೊಂಡಲ್ಲಿ ರೈತರು ನಷ್ಟದ ಭೀತಿಯಿಂದ ಹೊರ ಬರಬಹುದು. ರೋಗ ಬಾಧೆಯ ಮಾಹಿತಿಗಳನ್ನು ನೀಡಿದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಅಗತ್ಯ ಸಲಹೆಗಳನ್ನು ನೀಡುತ್ತೇವೆ. ರೈತರು ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಅನುಕೂಲ ಪಡೆಯಬೇಕು ಎಂದರು.
ಪ್ರಗತಿಪರ ರೈತ ಕಡಾರಿ ಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕೃಷಿ ಇಲಾಖೆಯ ತಾಂತ್ರಿಕ ವ್ಯವಸ್ಥಾಪಕಿ ಸವಿತಾ, ಸಸ್ಯ ಶರೀರ ತಜ್ಞ ಚಂದ್ರನಾಯ್ಕ, ಪತ್ರಕರ್ತ ಶಿವಕುಮಾರ್ , ಎಸ್.ಎಂ. ಜಾನ್ ಮಾತನಾಡಿದರು. ಬೀಜ ತಜ್ಞ ಡಾ.ಹನುಮಂತಪ್ಪ, ಅಡ್ಡ ರಮೇಶ , ಮಿರಾಕೊರನಹಳ್ಳಿ ಬಸವರಾಜರೆಡ್ಡಿ, ಮಂಜುನಾಥ, ಎಚ್.ಕೆ. ವೆಂಕಟೇಶ, ಬೋವಿ ಶ್ರೀನಿವಾಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.