ADVERTISEMENT

ನೀರು ಸರಬರಾಜು ಯೋಜನೆ ರದ್ದುಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 5:25 IST
Last Updated 17 ಫೆಬ್ರುವರಿ 2012, 5:25 IST

ಕಂಪ್ಲಿ: ಇಲ್ಲಿಗೆ ಸಮೀಪದ ದರೋಜಿ ಕೆರೆಯಿಂದ ಸಂಡೂರು ತಾಲ್ಲೂಕಿನ 14 ಹಳ್ಳಿಗಳ ಸಂಯುಕ್ತ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ರದ್ದುಪಡಿಸುವಂತೆ ರೈತರು ಆಗ್ರಹಿಸಿದರು.
ಈ ಕೆರೆ ವ್ಯಾಪ್ತಿಯ ರೈತರು ಮತ್ತು ಕೆರೆ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ಉದ್ದೇಶಿತ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.

ಬಳ್ಳಾರಿ ಜಿ.ಪಂ ಈ ಯೋಜನೆಗೆ ಹಸಿರು ನಿಶಾನೆ ತೋರಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ರೈತರು ಕಾಮಗಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕಾಮಗಾರಿ ಆರಂಭಕ್ಕೆ ಮುಂದಾಗಿದ್ದ ರಿಂದ ಮಂಗಳವಾರ 10 ಹಳ್ಳಿಗಳ ರೈತರೆಲ್ಲರೂ ಸಂಘಟಿತರಾಗಿ ಪ್ರತಿಭಟನೆ ನಡೆಸಿ ತೀವ್ರ ವಿರೋಧ ವ್ಯಕ್ತಪಡಿಸಿದರು.

ಕೆರೆ ನೀರು ಬಳಕೆಗೆ ಜಲಸಂಪನ್ಮೂಲ ಇಲಾಖೆಯಿಂದ ಇಲ್ಲಿಯವರೆಗೆ ಅನುಮತಿ ಪಡೆಯದೇ ಕಾಮಗಾರಿ ಆರಂಭಿಸಲು ಮುಂದಾಗಿದ್ದು, ಕೈಬಿಡ ದಿದ್ದಲ್ಲಿ ಹೋರಾಟ ತೀವ್ರಗೊಳಿಸುವು ದಾಗಿ ರೈತರು ಎಚ್ಚರಿಕೆ ನೀಡಿದರು. ನಾಲ್ಕೈದು ದಿನಗಳಲ್ಲಿ ಕಾಮಗಾರಿ ಸ್ಥಳದಲ್ಲಿರುವ ವಸ್ತುಗಳನ್ನು ತೆರವು ಗೊಳಿಸದಿದ್ದಲ್ಲಿ ರಾಜ್ಯ ಹೆದ್ದಾರಿ- 29ರಲ್ಲಿ ಸಂಚಾರ ತಡೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆ ಎಂಜಿನಿಯರ್ ಅಲಗನಾಥ ಅವರಿಗೆ ಸ್ಥಿತಿಗತಿ ವಿವರಿಸಿದ ರೈತರು ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿದರು.

ಕೆರೆಯಲ್ಲಿ ಅನೇಕ ವರ್ಷಗಳಿಂದ ಹೂಳು ತುಂಬಿದ್ದು, ನೀರಿನ ಸಂಗ್ರಹ ಸಾಮರ್ಥ್ಯ ಕ್ಷೀಣಿಸಿದೆ. ಇತ್ತೀಚೆಗೆ ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆ ವಿತರಣಾ ತೂಬು 3 ಎ ಮೂಲಕ ನಿಗದಿತ ಪ್ರಮಾಣದಲ್ಲಿ ಕೆರೆಗೆ ನೀರು ಹರಿದು ಬರುತ್ತಿಲ್ಲ ಎಂದು ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳು ವಿವರಿಸಿದರು.


ರೈತರ ಹೊಲಗಳಿಗೆ ನೀರಿನ ಕೊರತೆ ಇರುವಾಗ ಈ ಯೋಜನೆ ಜಾರಿಗೆ ಮುಂದಾಗಿರುವುದನ್ನು ಕೆರೆ ಅಚ್ಚುಕಟ್ಟು ವ್ಯಾಪ್ತಿಯ ಹೊಸದರೋಜಿ, ಹಳೇ ದರೋಜಿ, ಮಾದಾಪುರ, ಸೋಮಲಾ ಪುರ, ಹೊನ್ನಳ್ಳಿ, ಮಾವಿನಹಳ್ಳಿ, ಸುಗ್ಗೇನಹಳ್ಳಿ, ಗೋನಾಳ, ಹಂಪಾ ದೇವನಹಳ್ಳಿ, ಶ್ರೀರಾಮರಂಗಾಪುರ ಗ್ರಾಮಗಳ ರೈತರು ಖಂಡಿಸಿದರು.

ರೈತರ ವಿರೋಧದ ನಡುವೆ ಕಾಮಗಾರಿ ಆರಂಭಿಸಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ನೀರು ಬಳಕೆದಾರರ ಸಂಘದ ಹಳೇ ದರೋಜಿ ಭಾಗ-1ರ ಅಧ್ಯಕ್ಷ ಸಿ. ರಾಮಾಂಜ ನೇಯ, ಉಪಾಧ್ಯಕ್ಷ ವಿ. ರಾಮುಡು, ಕಾರ್ಯದರ್ಶಿ ಪಿ. ಹುಸೇನ್‌ಸಾಬ್, ಹೊಸ ದರೋಜಿ ನೀರು ಬಳಕೆದಾರರ ಸಂಘದ ಭಾಗ-2ರ ಅಧ್ಯಕ್ಷ  ವಿ. ತಿಮ್ಮಪ್ಪ, ಉಪಾಧ್ಯಕ್ಷ ಪಿ.ಎಸ್. ಲಿಂಗಪ್ಪ, ಡಿ.ಸಿ. ಯರ‌್ರಿಸ್ವಾಮಿ, ನೀರು ಬಳಕೆದಾರರ ಸಂಘದ ದರೋಜಿ ಭಾಗ-3ರ ಅಧ್ಯಕ್ಷ ಎಂ.ಎಸ್. ಗುರುಮೂರ್ತಿ, ಉಪಾಧ್ಯಕ್ಷ ಎಚ್. ದಾನಪ್ಪ, ಹೊನ್ನಳ್ಳಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಬಿ. ದೇವಣ್ಣ, ಸುಗ್ಗೇನಹಳ್ಳಿ ಬಿ. ರಾಮಾಂಜನೇಯ ಮತ್ತೊಮ್ಮೆ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡ ರಾದ ಡಾ.ಆರ್. ರಾಮಪ್ಪ, ಎ. ಶಂಕ್ರಪ್ಪ, ಸತ್ಯನಾರಾಯಣಶೆಟ್ಟಿ, ಜಂಬಣ್ಣ, ಎಸ್.ಕೆ. ಮಲ್ಲಿಕಾರ್ಜುನ, ವಿ.ಬಿ.ಲಿಂಗಪ್ಪ, ಕಾಳಪ್ಪ, ಚಾಪಲ ದೇವಣ್ಣ, ಎಂ. ರಾಮಾಂಜನೇಯ, ಎಸ್. ರಾಮಪ್ಪ, ಆರ್. ರಾಜಶೇಖರಪ್ಪ, ಕೆ. ವಿರುಪಣ್ಣ, ಕೆ.ಎಂ. ವಿಶ್ವನಾಥಸ್ವಾಮಿ, ಎಂ.ವಿ. ನಾಗರಾಜ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT