ADVERTISEMENT

`ಪುಣ್ಯಾಶ್ರಮದ ಕೋಗಿಲೆಗಳಿಂದ ಸರ್ವಋತು ಗಾಯನ'

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 6:03 IST
Last Updated 16 ಜುಲೈ 2013, 6:03 IST

ಕುರುಗೋಡು: ಕೋಗಿಲೆಗಳು ವಸಂತ ಮಾಸದಲ್ಲಿ ಮಾತ್ರ ಮಧುರವಾದ ಧ್ವನಿಯಲ್ಲಿ ಹಾಡುತ್ತವೆ. ಆದರೆ ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಶ್ರಯ ಪಡೆದ ಅಂಧ ಮತ್ತು ಅನಾಥ ಕೋಗಿಲೆಗಳು ವರ್ಷದ ಸರ್ವ ಋತುಗಳಲ್ಲಿ ಹಾಡುತ್ತವೆ.

ಅವುಗಳನ್ನು ಪೋಷಿಸಿ, ಬೆಳೆಸಲು ಭಕ್ತರು ನೆರವೇರಿಸುವ ತುಲಾಭಾರದ ಹಣ ವೆಚ್ಚ ಮಾಡಲಾಗುವುದು ಎಂದು ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ನುಡಿದರು.

ಇಲ್ಲಿಗೆ ಸಮೀಪದ ಮುದ್ದಟನೂರು ಗ್ರಾಮದಲ್ಲಿ  ಹಾರ‌್ಮೋನಿಯಂ ವಾದಕ ತಿಪ್ಪೇಸ್ವಾಮಿ, ತಬಲಾ ಕಲಾವಿದ ಶಿವರುದ್ರಪ್ಪ ಮತ್ತು ಗ್ರಾಮಸ್ಥರು ಏರ್ಪಡಿಸಿದ್ದ ತುಲಾಭಾರ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಹೆತ್ತ ತಂದೆತಾಯಿಗಳಿಗೆ ಬೇಡವಾಗಿ, ಸಮಾಜಕ್ಕೆ ಹೊರೆಯಾದ ಅಂಧ, ಅಂಗವಿಕಲ ಮತ್ತು ಅನಾಥ ಮಕ್ಕಳ ಹಸಿದ ಹೊಟ್ಟೆ ತುಂಬಿಸುವ ಕಾರ್ಯವನ್ನು ಶ್ರೀಮಠವು ಮಾಡುತ್ತಿದೆ ಎಂದರು.

ಸಿದ್ಧರಾಂಪುರ ಕದಳೀವನ ಶ್ರೀಮಠದ ಚಿದಾನಂದಯ್ಯ ಶ್ರೀಗಳು, ಅಂಧ ಅನಾಥ ಮಕ್ಕಳನ್ನು ಪೋಷಿಸಿ, ಬೆಳೆಸಿ ಅವರಿಗೆ ಸಂಗೀತ ಜ್ಞಾನ ನೀಡಿ ಸಮಾಜದಲ್ಲಿ ಒಂದು ಶಕ್ತಿಯಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ ಎಂದು ಶ್ಲಾಘಿಸಿದರು.  

ಕಲ್ಲಯ್ಯಜ್ಜ ಅವರಿಗೆ `ಭಕ್ತಾಕಿ' ಮತ್ತು ಸಿದ್ಧರಾಂಪುರದ ಚಿದಾನಂದ ಶ್ರೀಗಳಿಗೆ `ಅಮೂರ್ತ ಶಿಲ್ಪಿ' ಬಿರುದು ನೀಡಿ ಗೌರವಿಸಲಾಯಿತು. ಹನುಮಂತ ಕುಮಾರ್ ಕಾರಟಗಿ, ದೊಡ್ಡಯ್ಯ ಗವಾಯಿ ಬಳಗ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಎಸ್.ಎಂ. ನಾಗರಾಜಸ್ವಾಮಿ ನಿರೂಪಿಸಿದರು. ಬಿ. ಮಂಜಣ್ಣ ಸ್ವಾಗತಿಸಿದರು. ಎಂ. ಪೊಂಪಯ್ಯಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT