ADVERTISEMENT

ಪುರಂದರರ ಆದರ್ಶ ನಮಗೆ ಮಾದರಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 7:00 IST
Last Updated 3 ಫೆಬ್ರುವರಿ 2011, 7:00 IST

ಹೊಸಪೇಟೆ: ಶ್ರೀ ಪುರಂದರ ದಾಸರು ಸೇರಿದಂತೆ ದಾಸರು ಮತ್ತು ದಾರ್ಶನಿಕರು ತಿಳಿಸಿದ ಆದರ್ಶಗಳನ್ನು ರಾಜಕಾರಣಿಗಳು ಸೇರಿದಂತೆ ಪ್ರತಿಯೊಬ್ಬರು ಅನುಸರಿಸಬೇಕಾಗಿ ರುವುದು ಸದ್ಯದ ಅನಿವಾರ್ಯವಾಗಿದೆ ಎಂದು ಪ್ರವಾಸೋದ್ಯಮ ಮೂಲ ಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಜನಾರ್ದನ ರೆಡ್ಡಿ ತಿಳಿಸಿದರು.

ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಬುಧವಾರ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬಳ್ಳಾರಿ ಜಿಲ್ಲಾಡಳಿತ ಸಂಯುಕ್ತವಾಗಿ ಆಯೋಜಿಸಿದ್ದ ಎರಡು ದಿನಗಳ ‘ಪುರಂದರ ಉತ್ಸವ 2011’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶ್ರೀ ಪುರಂದರದಾಸರು ಕೇವಲ ಭಕ್ತಿ ಮಾರ್ಗಕ್ಕೆ ದಾರಿ ತೋರದೆ ಲೋಕದ ಅಂಕು ಡೊಂಕನ್ನು ತಿಳಿಸುವ ಮೂಲಕ ಸಾಮಾಜಿಕ ಸಮಾನತೆ ನ್ಯಾಯ ಮಾರ್ಗ ಹಾಗೂ ಭಕ್ತಿಮಾರ್ಗಕ್ಕೆ ದಾರಿ ತೋರಿಸಿದ್ದಾರೆ. ಮಲಿನವಾಗು ತ್ತಿರುವ ರಾಜಕೀಯ ವ್ಯವಸ್ಥೆ ಸೇರಿದಂತೆ ಪ್ರತಿಯೊಬ್ಬರು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾಡಿನ ಅಭ್ಯುದಯಕ್ಕೆ ನಾಂದಿ ಹಾಡಬೇಕಾಗಿದೆ ಎಂದರು.

ಪುರಂದರರ ಪುತ್ಥಳಿ: ಹಂಪಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಥೀಮ್ ಪಾರ್ಕ್ ಬಳಿಯೇ ಕನಕ ಮತ್ತು ಪುರಂದರರದಾಸರ ಭವ್ಯ ಪುತ್ಥಳಿಗಳನ್ನು ನಿರ್ಮಿಸುವ ಹಾಗೂ ನಾಡಿನ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಸೇರಿದಂತೆ ಪುತ್ತಳಿಯ ಬಳಿಯೇ ಭವ್ಯ ಶಾಶ್ವತ ವೇದಿಕೆ ನಿರ್ಮಿಸಿ ನಿರಂತರ ದಾಸರ ಕೀರ್ತನೆ ನಡೆಸುವ ಮೂಲಕ ಆದರ್ಶಗಳನ್ನು ಸಾರುವ ಕೆಲಸ ಮಾಡುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎನ್.ತಿಪ್ಪಣ್ಣ ಮಾತನಾಡಿ ದಾಸರ ಕೀರ್ತನೆ ಗಳು ಅದ್ಬುತವಾಗಿದ್ದು ಸಂಗೀತ ಗಾರರು ಸಂಗೀತಕ್ಕಿಂತ ಭಾವನೆಗಳಿಗೆ ಹೆಚ್ಚಿನ ಒಲವು ತೋರುವುದು ಅನಿವಾರ್ಯವಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಪರಮೇಶ್ವರರೆಡ್ಡಿ, ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮುನಿರಾಜ್, ಹೊಸಪೇಟೆ ಉಪ ವಿಭಾಗಾಧಿಕಾರಿ ಕಾಶೀನಾಥ ಪವಾರ ಹಾಜರಿದ್ದರು.

ಜಿಲ್ಲಾಧಿಕಾರಿ ಬಿ.ಶಿವಪ್ಪ  ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚೋರನೂರು ಕೊಟ್ರಪ್ಪ ನಿರೂಪಿಸಿದರು.ಬೆಂಗಳೂರಿನ ಡಾ.ನಾಗಮಣಿ ಶ್ರೀನಾಥ್, ಧಾರವಾಡದ ಪಂ.ಎಂ. ವೆಂಕಟೇಶ್ ಕುಮಾರ್, ಸಂಧ್ಯಾ ಕೇಶವರಾವ್ ಮತ್ತು ತಂಡದಿಂದ ನೃತ್ಯ ರೂಪಕ ಹಾಗೂ ಡಾ.ಲಕ್ಷ್ಮಣ್ ದಾಸ್ ಅವರಿಂದ ದಾಸವಾಣಿ ಕಾರ್ಯಕ್ರಮಗಳು ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.