ಕೂಡ್ಲಿಗಿ: ತಾಲ್ಲೂಕಿನ ಎ. ದಿಬ್ಬದಹಳ್ಳಿ ಈಗ ಬಯಲು ಬಹಿರ್ದೆಸೆ ಮುಕ್ತ ಗ್ರಾಮವಾಗಿ ಹೊರ ಹೊಮ್ಮಿದೆ. ಸ್ವಚ್ಛ ಭಾರತ್ ಮಿಷನ್ ಅಡಿ ಗ್ರಾಮದಲ್ಲಿ ಬಹುತೇಕರಿಗೆ ಸುಲಭ ಶೌಚಾಲಯ ನಿರ್ಮಿಸಲಾಗಿದೆ. ಜರಿಮಲೆ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಾಮದಲ್ಲಿ 310 ಕುಟುಂಬಗಳಿದ್ದು, 285 ಕುಟುಂಬಗಳು ಶೌಚಾ ಲಯ ಹೊಂದಿವೆ. ಅದಕ್ಕೂ ಮುನ್ನ, ಸುಮಾರು 2150 ಜನಸಂಖ್ಯೆ ಪೈಕಿ ಎಲ್ಲರೂ ಬಹಿರ್ದೆಸೆಗೆ ಬಯಲಿಗೇ ಹೋಗುತ್ತಿದ್ದರು.
ಮಹಿಳೆಯರ ಸ್ಥಿತಿ ಶೋಚನಿಯವಾಗಿತ್ತು. ಅದನ್ನು ನಿವಾರಿಸಲು ಪಂಚಾಯ್ತಿ ಆಡಳಿತ ಹಾಗೂ ಸ್ಥಳೀಯ ಸದಸ್ಯರು ಒಟ್ಟಾಗಿ, ಬಯಲು ಬಹಿರ್ದಸೆಯಿಂದ ಅಗುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದರು.
‘ಮೊದಲು ಶೌಚಾಲಯದ ಮಹತ್ವ ತಿಳಿಯದೆ ಬಯಲಿಗೆ ಹೋಗುತ್ತಿದ್ದೆವು. ಆದರೆ ಅದರಿಂದ ಅಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿ ಪಂಚಾಯಿತಿ ಶೌಚಾಲಯ ನಿರ್ಮಿಸಿಕೊಟ್ಟಿದೆ. ಅದರಿಂದ ಹೆಚ್ಚು ಅನುಕೂಲವಾಗಿದೆ’ ಎಂದು ಗ್ರಾಮದ ಸೋಮಕ್ಕ ಮತ್ತು ಬಸಮ್ಮ ತಿಳಿಸಿದರು.
ಗುಣಮಟ್ಟದ ಶೌಚಾಲಯ: ‘ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳಲು ಪರಿಶಿಷ್ಟರಿಗೆ ₹15 ಸಾವಿರ, ಇತರರಿಗೆ ₹12 ಸಾವಿರ ಅನುದಾನ ನಿಗದಿಯಾಗಿದೆ. ಶೌಚಾಲಯ ನಿರ್ಮಾ ಣದ ಪ್ರತಿ ಹಂತವನ್ನು ದಾಖಲೀಕರಣ ಮಾಡಿ, ನಂತರ ಫಲನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗಿದೆ’ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ. ನಾಗರಾಜ ತಿಳಿಸಿದರು.
‘ಗ್ರಾಮದಲ್ಲಿ ಪಂಚಾಯಿತಿಯ ಪಟ್ಟಿಯಲ್ಲಿಲ್ಲದ 25 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರ ಪಡಿತರ ಚೀಟಿ ಪಡೆದು ಪಟ್ಟಿಯಲ್ಲಿ ಸೇರಿಸಿ, ಅನುಮೋದನೆಗಾಗಿ ಜಿಲ್ಲಾ ಪಂಚಾಯಿತಿಗೆ ಕಳಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಅವರಿಗೂ ಶೌಚಾಲಯ ನಿರ್ಮಿಸಿಕೊಳ್ಳಲು ಸೌಲಭ್ಯ ನೀಡ ಲಾಗುತ್ತದೆ’ ಎಂದರು.
ರಸ್ತೆಯಲ್ಲಿ ಹರಿಯುವ ನೀರು: ‘ಗ್ರಾಮ ಸಡಕ್ ಯೋಜನೆಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಿದ್ದರೂ ಚರಂಡಿ ನಿರ್ಮಿಸಿಲ್ಲ. ನೀರು ರಸ್ತೆಯಲ್ಲೇ ಹರಿಯುತ್ತದೆ’ ಎಂದು ಮುಖಂಡ ಜಿ.ಆರ್. ಸಿದ್ದೇಶ್ ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.