ADVERTISEMENT

ಬೇವಿನ ಮರದಿಂದ ಹಾಲು!

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 9:36 IST
Last Updated 18 ಸೆಪ್ಟೆಂಬರ್ 2013, 9:36 IST

ಕುರುಗೋಡು: ಸಮೀಪದ ದಮ್ಮೂರು ಗ್ರಾಮದ ಬಳಿಯ ವೆಂಕಾವಧೂತರ ಆಶ್ರಮದ ಹತ್ತಿರ ಇರುವ ಬೇವಿನ ಮರದ ಕೊಂಬೆಯೊಂದರಿಂದ ಕಳೆದ ನಾಲ್ಕೈದು ದಿನಗಳಿಂದ ಬಿಳಿಯ ಬಣ್ಣದ ದ್ರವ ಪದಾರ್ಥ ಸುರಿಯುತ್ತಿದ್ದು, ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ವಿಶೇಷವೆಮದರೆ, ವೈಜ್ಞಾನಿಕ ಮಹತ್ವ ಅರಿಯದ ಅನೇಕರು ಇದು ದೇವರ ಮಹಿಮೆ ಇರಬಹುದು ಎಂದೇ ವಿಶೇಷ ಪೂಜೆ– ಪುನಸ್ಕಾರಕ್ಕೆ ಮೊರೆ ಹೋಗಿದ್ದಾರೆ.

ಕಳೆದ ಭಾನುವಾರ ಸಂಜೆ ದಾರಿಹೋಕರೊಬ್ಬರಿಗೆ ಈ ದೃಶ್ಯ ಕಂಡುಬಂದಿದ್ದು, ಬೇವಿನ ಮರದಿಂದ ‘ಹಾಲು’ ವಸರುತ್ತಿದೆ ಎಂಬ ಸುದ್ದಿ ಒಬ್ಬರಿಂದೊಬ್ಬರಿಗೆ ಹರಡಿ, ಇದೀಗ ಆ ಸ್ಥಳದಲ್ಲಿ ಜನದಟ್ಟಣೆ ಕಂಡುಬರುತ್ತಿದೆ.

ಸುತ್ತಮುತ್ತಲಿನ ಗ್ರಾಮಗಳ ಜನರು ‘ಹಾಲು’ ಸುರಿಸುವ ಬೇವಿನ ಮರ ನೋಡಲು ತಂಡೋಪತಂಡವಾಗಿ ಆಗಮಿಸುತ್ತಿದ್ದು, ‘ಇದು ದೇವರ ಮಹಿಮೆಯೇ ಇರಬಹುದು’ ಎಂಬ ನಂಬಿಕೆಯೊಂದಿಗೆ ಮರಕ್ಕೆ ಪೂಜೆ ಸಲ್ಲಿಸಿ ಕಾಯಿ, ಹಣ್ಣು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರಲ್ಲದೆ, ಕೆಲವರು ಮಕ್ಳು ಮರಿಗಳೊಂದಿಗೆ ಧಾವಿಸಿ ಆ ಬಿಳಿದ್ರವ ಪದಾರ್ಥವನ್ನು‘ತೀರ್ಥ’ದಂತೆಯೇ ಸ್ವೀಕರಿಸುತ್ತಿದ್ದಾರೆ.

ಮೂಢ ನಂಬಿಕೆಗಳಿಗೆ ಮಹತ್ವ ನೀಡುವ ಜನರು, ಸಾಕ್ಷಾತ್ ದೇವಿಯ ಕೃಪೆಯಿಂದ ಮರದಲ್ಲಿ ‘ಹಾಲು’ ಸುರಿಯುತ್ತಿದೆ ಎಂದು ಭಾವಿಸಿದ್ದಾರೆ.

ಮಂಗಳವಾರ ಕೆಲವು ಗ್ರಾಮಸ್ಥರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಹೋಳಿಗೆ ಮತ್ತಿತರ ಸಿಹಿ ಅಡುಗೆ ತಯಾರಿಸಿಕೊಂಡು ಬಂದು ಬೇವಿನ ಮರಕ್ಕೆ ಪೂಜೆ ಸಲ್ಲಿಸಿ ನೈವೇದ್ಯ ಹಿಡಿಯುತ್ತಿರುವುದು ಕಂಡುಬಂತು.

ಇನ್ನೂ ವಿಶೇಷವೆಂದರೆ, ಕೀಟಗಳಿಂದ ಎದುರಾಗುವ ರೋಗವನ್ನು ನಿಯಂತ್ರಸಿಕೊಳ್ಳಲು ಮರದಲ್ಲಿರುವ ಫ್ಲ್ಯುಯಿಡ್‌ ನೆರವಾಗುತ್ತದೆ. ಕೀಟಗಳು ಮರದ ಕೊಂಬೆಯನ್ನು ಕಚ್ಚಿ ರಂದ್ರ ಕೊರೆದಲ್ಲಿ, ಅವುಗಳಿಂದ ರಕ್ಷಣೆಪಡೆಯಲು ಕೊಂಬೆಯಿಂದ ಹೊರ ಬರುವ ಫ್ಲ್ಯುಯಿಡ್‌, ಮರದ ಸ್ವಯಂ ರಕ್ಷಣೆಗೆ ಮುಂದಾಗುತ್ತದೆ ಎಂದು ಸಸ್ಯ ವಿಜ್ಞಾನಿಗಳು ಹೇಳುತ್ತಾರೆ.

ಸಸ್ಯ ಲೋಕದ ವೈಜ್ಞಾನಿಕ ಸತ್ಯ ಅರಿಯದ ಮುಗ್ಧ ಜನರು ‘ಜನ ಮರುಳೋ–ಜಾತ್ರೆ ಮರಳೋ’ ಎಂಬಂತೆ, ಈ ಬೇವಿನ ಮರದಲ್ಲಿ ಹಾಲು ಸುರಿಯುತ್ತಿರುವುದು ದೇವಿಯ ಮಹಿಮೆ ಇರಬಹುದು ಎಂದು ನಂಬಿ ಪೂಜೆಗೆ ಶರಣಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.