ADVERTISEMENT

ಭಕ್ತಿಗೀತೆ ಸ್ಪರ್ಧೆ: ವಿಜೇತರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:12 IST
Last Updated 4 ಏಪ್ರಿಲ್ 2013, 6:12 IST

ಕಂಪ್ಲಿ: ಸ್ಥಳೀಯ ಸತ್ಯ ಅರುಣೋದಯ ಸೇವಾ ಸಮಿತಿಯವರು ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮಕೃಷ್ಣ ಪರಮಹಂಸ ಜಯಂತಿ ಅಂಗವಾಗಿ ಭಾನುವಾರ ಭಕ್ತಿಗೀತೆ ಸ್ಪರ್ಧೆ ಹಮ್ಮಿಕೊಂಡಿದ್ದರು.

ಪಿಎಸ್‌ಐ ಎನ್. ಆನಂದ ಮಾತನಾಡಿ, ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಚಿಂತನೆ ಮತ್ತು ಆದರ್ಶಗಳನ್ನು ಮಕ್ಕಳು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಸತ್ಯ ಅರುಣೋದಯ ಸೇವಾ ಸಮಿತಿ ಅಧ್ಯಕ್ಷ ಡಿ.ವಿ. ಸತ್ಯನಾರಾಯಣ ಮಾತನಾಡಿ, ಮಕ್ಕಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳುವಂತೆ ಮನವಿ ಮಾಡಿದರು.

ADVERTISEMENT

ವಾಸವಿ ಯುವಜನ ಸಂಘ ಅಧ್ಯಕ್ಷ ಎಂ. ಶ್ರೀನಿವಾಸ, ಡಿ.ವಿ. ಅರುಣ ಸತ್ಯನಾರಾಯಣ, ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ ಉಪಸ್ಥಿತರಿದ್ದರು.

ಸ್ಪರ್ಧೆಯ ತೀರ್ಪುಗಾರರಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಶಿಕ್ಷಕ ವಿರೂಪಾಕ್ಷಪ್ಪ ಇಟಿಗಿ, ಗಂಗಾವತಿ ಸಂಗೀತ ಕಲಾವಿದ ಸದಾನಂದ ಸೇಠ್ ಪಾಲ್ಗೊಂಡಿದ್ದರು.

ಹಿರಿಯ ವಿಭಾಗದಲ್ಲಿ ಅನ್ನಪೂರ್ಣ ಹೂಗಾರ್(ಪ್ರಥಮ), ಸುಪ್ರಭ(ದ್ವಿತೀಯ), ಯಲ್ಲಪ್ಪ ಬಂಡಾರಗಾರ್(ತೃತೀಯ). ಹೊನ್ನೂರಬಿ (ಚತುರ್ಥ), ಪಲ್ಲವಿ ಪ್ರಹ್ಲಾದ್(ಪಂಚಮ).

ಕಿರಿಯರ ವಿಭಾಗದಲ್ಲಿ ಜೆ. ಚಿನ್ಮಯ(ಪ್ರಥಮ), ಕೆ. ಪ್ರೇಕ್ಷ(ದ್ವಿತೀಯ), ಅನೂಷ ಗಂಡದ(ತೃತೀಯ), ಕೆ. ಶಾಜಿದಾ(ಚತುರ್ಥ), ಪ್ರತಿಭಾ ಪ್ರಹ್ಲಾದ(ಪಂಚಮ), ಇವರಿಗೆ ಬಹುಮಾನ, ಪ್ರಶಸ್ತಿ ಪತ್ರ, ನಗದು ಮತ್ತು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದವರಿಗೆ ಉದಯೋನ್ಮುಖ ಹಾಡುಗಾರ ಮತ್ತು ಹಾಡುಗಾರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 30 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಕಂಪ್ಲಿ: ಪರಿಹಾರಕ್ಕೆ ಆಗ್ರಹ
ಕಂಪ್ಲಿ:
ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಪರವಾನಿಗೆ ಪಡೆದು ಹಮಾಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು ಹಮಾಲರು ಮೃತಪಟ್ಟಿದ್ದು, ಇಲ್ಲಿಯವರಗೆ ಜನಶ್ರೀ ವಿಮಾ ಯೋಜನೆ ಪರಿಹಾರ ಹಣ ಸಂಬಂಧಪಟ್ಟವರಿಗೆ ತಲುಪಿಲ್ಲ ಎಂದು ಸಿಐಟಿಯು ಮಾಜಿ ಜಿಲ್ಲಾಧ್ಯಕ್ಷ ಬೈರೆಡ್ಡಿ ತಿರುಪಾಲ್ ಆರೋಪಿಸಿದ್ದಾರೆ.

ಎಪಿಎಂಸಿ ಯಿಂದ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿದ್ದ ಹಮಾಲಿ ಸೂಗೂರ ಈರಪ್ಪ 2010 ಮೇ 23ರಂದು, ಪೂಜಾರಿ ಬಸಪ್ಪ 2011 ಮಾರ್ಚ್ 9ರಂದು ಮತ್ತು ಹಂಪಾದೇವನಹಳ್ಳಿ ಮೃತ್ಯುಂಜಯ ಮೃತಪಟ್ಟಿದ್ದು, ಇವರಿಗೆ ಜನಶ್ರೀ ವಿಮಾ ಯೋಜನೆ ದೊರೆಯದೆ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.

ಕುಟುಂಬದ ಸದಸ್ಯರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಗೆ ಅಲೆದರೂ ಇಲ್ಲಿಯವರೆಗೆ ಯಾವುದೇ ಪ್ರಗತಿ ಕಂಡಿಲ್ಲ ಎಂದು ದೂರಿದ್ದಾರೆ.

ಮರಣವನ್ನಪ್ಪಿದ ಹಮಾಲರ ಕುಟುಂಬದ ಸದಸ್ಯರಿಗೆ ಕೂಡಲೇ ಜನಶ್ರೀ ವಿಮಾ ಯೋಜನೆಯ ಪರಿಹಾರವನ್ನು ನೀಡುವಂತೆ ಹಮಾಲರ ಸಂಘದ ಅಧ್ಯಕ್ಷ ಯಮುನಾಸಾಬ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.