ADVERTISEMENT

ಭೂಮಿ ವಶ ಕೈಬಿಡಲು ಆಗ್ರಹ: ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:45 IST
Last Updated 25 ಜನವರಿ 2011, 19:45 IST
ಭೂಮಿ ವಶ ಕೈಬಿಡಲು ಆಗ್ರಹ: ಸೈಕಲ್ ಜಾಥಾ
ಭೂಮಿ ವಶ ಕೈಬಿಡಲು ಆಗ್ರಹ: ಸೈಕಲ್ ಜಾಥಾ   

ಬಳ್ಳಾರಿ: ಅಕ್ರಮ ಗಣಿಗಾರಿಕೆ ಹಾಗೂ ಕೈಗಾರಿಕೆ ಸ್ಥಾಪನೆಗಾಗಿ ಭೂಸ್ವಾಧೀನದ ನೆಪದಲ್ಲಿ ಕೃಷಿ ಭೂಮಿಯನ್ನು ಬಲವಂತದಿಂದ ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಕ್ರಿಯಾ ಸಮಿತಿ ಹಾಗೂ ರಾಜಕೀಯ ಜನಾಂದೋಲನ ಗ್ರಾಮ ಗಣರಾಜ್ಯ ವೇದಿಕೆಗಳ ವತಿಯಿಂದ ಮಂಗಳವಾರ ನಗರದಲ್ಲಿ ಬೃಹತ್ ಸೈಕಲ್ ಜಾಥಾ ನಡೆಸಲಾಯಿತು.

ಕ್ರಿಯಾ ಸಮಿತಿಯ ನೂರಾರು ಕಾರ್ಯಕರ್ತರು ಸೈಕಲ್ ಜಾಥಾ ಮೂಲಕ ದುರ್ಗಮ್ಮ ದೇವಸ್ಥಾನ, ರಾಯಲ್‌ವೃತ್ತ, ಬೆಂಗಳೂರು ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಅರ್ಪಿಸಿದರು.

‘ಅಕ್ರಮ ಗಣಿಗಾರಿಕೆ, ಗಡಿ, ಗಣಿ ಒತ್ತುವರಿ ಕುರಿತು ಸಮಾಜ ಪರಿವರ್ತನಾ ಸಮುದಾಯವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ನಿರ್ಣಾಯಕ ಹಂತದಲ್ಲಿದ್ದು, ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದು ಸಾಬೀತಾಗಲಿದೆ. ಆದರೆ, ಕೈಗಾರಿಕೆಗಳ ಹೆಸರಿನಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಿರುವುದು ಅಕ್ಷಮ್ಯ’ ಎಂದು ಪ್ರತಿಭಟನಾಕಾರರು ದೂರಿದರು.

ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಕ್ರಿಯಾ ಸಮಿತಿ ಸಂಯೋಜಕ ರಾಘವೇಂದ್ರ ಕುಷ್ಟಗಿ, ಸಮಾಜ ಪರಿವರ್ತನಾ ಸಮುದಾಯದ ಮಾಜಿ ಅಧ್ಯಕ್ಷ ಡಾ.ಜಿ.ಕೆ. ಕಡೆಕೋಡಿ,  ರೈತ ಹೋರಾಟಗಾರ ಎನ್.ಮಲ್ಲಿಕಾರ್ಜುನರೆಡ್ಡಿ, ವಿ.ಎಫ್. ಕೂಗನೂರಮಠ, ಕೆ.ಹನುಮಂತರೆಡ್ಡಿ, ಕೆ. ರುದ್ರಪ್ಪ ಅಲ್ದಳ್ಳಿ ಬಸವರಾಜ ಸೇರಿದಂತೆ ನೂರಾರು ಕಾರ್ಯಕರ್ತರು ಜಾಥಾದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.