ADVERTISEMENT

ಮಕ್ಕಳಿಗೆ ನೈತಿಕ ಸಂಸ್ಕಾರ ನೀಡಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 5:10 IST
Last Updated 14 ನವೆಂಬರ್ 2012, 5:10 IST

ಹೊಸಪೇಟೆ: ದೇಶದ ಉತ್ತಮ ಭವಿಷ್ಯಕ್ಕಾಗಿ ಮಕ್ಕಳಿಗೆ ಸಂಸ್ಕಾರ ನೀಡುವುದು ಅಗತ್ಯವಾಗಿದೆ. ಇಂತಹ ಬದಲಾವಣೆ ವಿದ್ಯಾರಣ್ಯರ ಪೂಣ್ಯಭೂಮಿ (ಹಂಪಿ, ಹೊಸಪೇಟೆ)ಯಿಂದಲೇ ಆರಂಭವಾಗಬೇಕು ಎಂದು ಕಂಚಿ ಕಾಮಕೋಟಿ ಪೀಠದ ಜಯೇಂದ್ರಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಹೇಳಿದರು.

ಹೊಸಪೇಟೆ ವಿದ್ಯಾರಣ್ಯ ವಿದ್ಯಾಪೀಠದಲ್ಲಿ ವಿಜಯಯಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾದಪೂಜೆ ಸ್ವೀಕರಿಸಿ ಆಶೀರ್ವಚನ ನೀಡಿದರು. “ನಮ್ಮ ಸಂಸ್ಕಾರ ದೇಶದ ರಕ್ಷಣೆಯ ಜೊತೆ ಸಾಮಾಜಿಕ ಕಲಹ, ಜಾತಿ ಜಾತಿಗಳ ನಡುವಿನ ವೈರತ್ವ ಹೋಗಲಾಡಿಸಿ ಸಾಮಾಜಿಕ ಸಾಮರಸ್ಯಕ್ಕೆ ಕಾರಣವಾಗಲಿದೆ ಇಂತಹ ಸದ್ಗುಣಗಳನ್ನು ಪ್ರತಿಯೊಬ್ಬರು ತಮ್ಮಂದಿಗೆ ಇತರರಿಗೂ ಹಂಚುವಂತಾಗಬೇಕು. ಧರ್ಮ ರಕ್ಷಣೆ, ಸಮಾನತೆಯ ಪ್ರತೀಕವಾದ ಹಂಪಿ ಕ್ಷೇತ್ರ ಮತ್ತೊಮ್ಮೆ ಇಂತಹ ಬದಲಾವಣೆಗೆ ನಾಂದಿಯಾಗಲಿ” ಎಂದರು.

ಪ್ರವಾಸೋದ್ಯಮ ಸಚಿವ ಆನಂದಸಿಂಗ್, ಕಾರ್ಯಾಧ್ಯಕ್ಷ ಎಚ್.ಜಿ. ರಂಗನಗೌಡ, ಮಾಜಿ ಶಾಸಕರಾದ ಎಚ್.ಆರ್. ಗವಿಯಪ್ಪ ಸಾಮೂಹಿಕ ಪಾದಪೂಜೆ ನೆರವೇರಿಸಿದರು. ಶಂಕರಮಠ ನಿರ್ಮಾಣಕ್ಕೆ ಸ್ಥಳದಾನ ನೀಡಲಾಯಿತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ ವೇದಾದ್ಯಯನ ವಿದ್ಯಾರ್ಥಿ ಸಮ್ಮೇಳನ ಸಹ ನಡೆಯಿತು. 

ಅದ್ದೂರಿ ಸ್ವಾಗತ: ವಿಜಯ ಯಾತ್ರೆಯನ್ನು ಹೊಸಪೇಟೆಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಮಹಿಳಾ ಭಜನಾ ಮಂಡಳಿಗಳಿಂದ ಭಜನೆ, ಕೋಲಾಟ, ಡೊಳ್ಳು ಕುಣಿತ, ಹಲಗೆ ವಾದ್ಯಗಳು, ಕಂಚಿಮೇಳ ತಂಡಗಳು ಆದಿಗುರು ಶಂಕರ ಭಗವತ್ಪಾದಾಚಾರ್ಯರ ಕಂಚಿಕಾಮಕೋಟಿ ಪೀಠಾಧಿಪತಿ ಜಯೇಂದ್ರಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಅವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲಾಯಿತು.

ನಗರದ ಪ್ರಮುಖ ವೃತ್ತಗಳಲ್ಲಿ ಆಯಾ ಭಾಗದ ಸಮಾಜಗಳ ಮುಖಂಡರು ಶ್ರೀಗಳಿಗೆ ತಮ್ಮ ಸಮಾಜದ ವತಿಯಿಂದ ಗೌರವ ಸಮರ್ಪಿಸಿದರು. ಬ್ರಾಹ್ಮಣ ಸಮಾಜದ ಮುಖಂಡರಾದ ವೆಂಕಟರಾವ್, ಎ. ಶೀನಂಭಟ್, ಎಸ್.ಸತ್ಯನಾರಾಯಣಶಾಸ್ತ್ರೀ, ಕೆ. ದಿವಾಕರ, ರಮೇಶ ಪುರೋಹಿತ್, ಸುರೇಶ್ ದೇಸಾಯಿ, ನರಸಿಂಹಮೂರ್ತಿ, ಕೇಶವ, ಅನಿಲ್ ನಾಯ್ಡು, ಮಧ್ವಾಚಾರ್ಯ ಮತ್ತಿತರರು ಭಾಗವಹಿಸಿದ್ದರು. ಪ್ರಮುಖ ಬೀದಿಗಳಲ್ಲಿ ಭವ್ಯ ಶೋಭಾಯಾತ್ರೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.