ಸುಶೀಲಾನಗರ (ಸಂಡೂರು): ‘ಮದುವೆ ಎನ್ನುವುದು ಎರಡು ಮನಸ್ಸುಗಳ ಸಂಬಂಧ. ದಂಪತಿಗಳು ಪರಸ್ಪರ ಪ್ರೀತಿ, ಸಹಕಾರ, ವಿಶ್ವಾಸದಿಂದ ಆದರ್ಶ ಜೀವನ ನಡೆಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು’ ಎಂದು ರಾಜನಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸಲಹೆ ನೀಡಿದರು. ತಾಲ್ಲೂಕಿನ ಸುಶೀಲಾನಗರ ಗ್ರಾಮದಲ್ಲಿ ಶುಕ್ರವಾರ ವಾಲ್ಮೀಕಿ ನಾಯಕ ಮಹಾಸಭಾದ ಗ್ರಾಮದ ಘಟಕದ ವತಿಯಿಂದ ಬಿಕೆಜಿ, ವೆಸ್ಕೊ ಹಾಗೂ ಝೆಡ್ಟಿಸಿ ಕಂಪನಿಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ 3ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಪರಿವರ್ತನೆ ವ್ಯಕ್ತಿಗತವಾದಾಗ ಮಾನವ ಮಹಾದೇವನಾಗುತ್ತಾನೆ. ಈ ಪರಿವರ್ತನೆ ಸಮುದಾಯದಲ್ಲಿ ಆದಾಗ ಇಂತಹ ಸಮಾಜ ಮುಖಿ ಕಾರ್ಯಕ್ರಮಗಳು ನಡೆಯಲು ಸಾಧ್ಯ’ ಎಂದರು.
ಸಂಡೂರಿನ ವಿರಕ್ತಮಠದ ಪ್ರಭುಸ್ವಾಮೀಜಿ ಮಾತನಾಡಿ, ‘ಮದುವೆಗಳು ಆರ್ಥಿಕ ಹೊರೆಯಾಗಬಾರದು. ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹಗಳು ಸಹಕಾರಿಯಾಗಿವೆ. ಶ್ರೀಮಂತರು ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳ ಮದುವೆ ಮಾಡುವುದರಿಂದ, ಇವುಗಳಿಗೆ ದೊಡ್ಡ ಅರ್ಥ ಬರುತ್ತದೆ’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡ್ರು ಕಾರ್ಯಕ್ರಮ ಉದ್ಘಾಟಿಸಿದರು. ಮುಖಂಡರಾದ ಜಂಬಯ್ಯನಾಯಕ್, ಸಿ.ಎಂ. ಶಿಗ್ಗಾವಿ, ಆರ್. ನಾಗರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.