ಬಳ್ಳಾರಿ: ಆಂಧ್ರಪ್ರದೇಶದ ಚಿತ್ತೂರಿನ ಅಜ್ಜಿಯ ಮನೆಯಿಂದ ಏ.10ರಂದು ಕಾಣೆಯಾಗಿದ್ದ ಮಾತು ಬಾರದ, ಕಿವಿ ಕೇಳದ 13 ವರ್ಷದ ಬಾಲಕ ವಿಕ್ರಂನನ್ನು ಮಕ್ಕಳ ಕಲ್ಯಾಣ ಸಮಿತಿ ಪ್ರಮುಖರು ನಗರದಲ್ಲಿ ಮಂಗಳವಾರ ಮರಳಿ ಪೋಷಕರ ವಶಕ್ಕೆ ನೀಡಿದರು.
ಏ.10ರಂದು ರೈಲಿನಲ್ಲಿ ಬಂದು ಎಪಿಎಂಸಿ ಮಾರುಕಟ್ಟೆಯಲ್ಲಿ ತಿರುಗಾಡುತ್ತಿದ್ದ ಬಾಲಕನನ್ನು ಕಂಡ ಸಾರ್ವಜನಿಕರು ಅಲ್ಲಿನ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಪೊಲೀಸರು ಏ.11ರಂದು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು.
ಮಾತು ಬಾರದ, ಕಿವಿ ಕೇಳದ ಬಾಲಕನಿಂದ ಆತನ ವಿಳಾಸದ ಬಗ್ಗೆ ಮಾಹಿತಿ ಸಂಗ್ರಹಿಸುವುದು ಕಷ್ಟಕರವಾಗಿತ್ತು. ಈ ಸನ್ನಿವೇಶದಲ್ಲಿ ಸರ್ಕಾರಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಮುಖ್ಯಶಿಕ್ಷಕ ಗೋವಿಂದಪ್ಪ ನೆರವಿಗೆ ಬಂದರು.
ಬಾಲಕನನ್ನು ಆಪ್ತಸಮಾಲೋಚನೆ ಗೊಳಪಡಿಸಿದಾಗ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಗುಡಿಯೆತ್ತಂ ತಾಲ್ಲೂಕಿನ, ಸಂಗರಪುರಂ ಗ್ರಾಮದ ನಿವಾಸಿ ಎಂದು ತಿಳಿದುಬಂತು.
ನಂತರ ಪೋಷಕರ ಮೊಬೈಲ್ ಫೋನ್ಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ನಂತರ ಆತನ ತಂದೆ, ತಾಯಿ ಹಾಗೂ ಅಜ್ಜಿ ಸಮಿತಿ ಸಭೆಗೆ ಹಾಜರಾಗಿ ಬಾಲಕನ ಕುರಿತು ಸೂಕ್ತ ದಾಖಲೆಗಳನ್ನು ಹಾಜರುಪಡಿಸಿದರು.
ಅವರೆಲ್ಲ ಬಾಲಕನ ಸಂಬಂಧಿಕರೆಂದು ಖಚಿತಪಟ್ಟಿದ್ದರಿಂದ ಅವರಿಗೆ ಒಪ್ಪಿಸಲಾಯಿತು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮೊಹಮ್ಮದ್ ಸರ್ವರ್ ತಿಳಿಸಿದ್ದಾರೆ.
ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಮೈದೂರು, ಸದಸ್ಯರಾದ ಮಂಜುನಾಥ, ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕ ರಾಜಾನಾಯ್ಕ, ಕಾಣೆಯಾದ ಮಕ್ಕಳ ಬ್ಯೂರೋ ಸಂಯೋಜಕ ಗಣೇಶ ಈ ಸಂದರ್ಭಕ್ಕೆ ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.