ಬಳ್ಳಾರಿ: ನಗರವೂ ಒಳಗೊಂಡಂತೆ ಜಿಲ್ಲೆಯ ವಿವಧೆಡೆ ಬುಧವಾರ ಭಾರಿ ಗಾಳಿಯ ಸಮೇತ ಮಳೆ ಸುರಿದಿದ್ದು, ಗಾಳಿಯ ರಭಸಕ್ಕೆ ನಗರದ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿದವು.
ಸಂಜೆ 5ರ ವೇಳೆಗೆ ಬೀಸಲಾರಂಭಿಸಿದ ಭಾರಿ ಗಾಳಿಯಂದಾಗಿ ಮುಗಿಲೆತ್ತರದ ಮರಗಳು ನೆಲಕ್ಕುಳಿದವು. ಒಣಗಿದ ಟೊಂಗೆಗಳು, ತರಗೆಲೆಗಳು ಗಾಳಿಯ ರಭಸಕ್ಕೆ ಕೆಳಗೆ ಬಿದ್ದವು.
ಮಳೆ ಹಾಗೂ ಬಿರುಗಾಳಿಯಿಂದಾಗಿ ಗುಡಸಲುಗಳ ಮೇಲ್ಛಾವಣಿ, ತಗಡಿನ ಹೊದಿಕೆಗಳು, ಭಾರಿ ಕಟ್ಟಡಗಳ ಮೇಲೆ ಇರಿಸಿದ್ದ ನಾಮಫಲಕಗಳು, ಅಂಗಡಿಗಳೆದುರಿನ ನಾಮಫಲಕ, ಸಣ್ಣಪುಟ್ಟ ವಸ್ತುಗಳು ಹಾರಿ ಹೋದವು. ಅಂದಾಜು ಎರಡು ಗಂಟೆಗಳ ಕಾಲ ನಗರದಲ್ಲಿ ಜನಜೀವನ ಅಸ್ವಸ್ಥಗೊಂಡಿತ್ತು.
ಆಲಿಕಲ್ಲು ಮಳೆ: ತಾಲ್ಲೂಕಿನ ಕಪಗಲ್ಲು, ಸಿರಿವಾರ, ಕೊರ್ಲಗುಂದಿ, ಜಾಲಿಬೆಂಚಿ, ಮೋಕಾ, ಡಿ.ನಾಗೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಸಂಜೆ ಭಾರಿ ಗಾಳಿ ಸಮೇತ ಸುರಿದ ಆಲಿಕಲ್ಲು ಮಳೆಯಿಂದ ತೀವ್ರ ಹಾನಿ ಸಂಭವಿಸಿದ್ದು, ಕಪಗಲ್ಲು ಗ್ರಾಮದ ಹೊರ ವಲಯದಲ್ಲಿ ಹೊನ್ನಳ್ಳಿಯ ಕುರಿಗಾರರು ತಂದಿದ್ದ 40ಕ್ಕೂ ಅಧಿಕ ಕುರಿಗಳು ಸಾವಿಗೀಡಾಗಿವೆ.
ಸಂಜೆ ಇದ್ದಕ್ಕಿದ್ದಂತೆಯೇ ಸುರಿದ ಆಲಿಕಲ್ಲಿನ ಹೊಡೆತಕ್ಕೆ ಸಿಲುಕಿ 600 ಕುರಿಗಳ ಪೈಕಿ 40ಕ್ಕೂ ಹೆಚ್ಚು ಕುರಿಗಳು ಪಟಪಟನೆ ಸತ್ತು ಬಿದ್ದವು ಎಂದು ಕುರಿಗಾರ ಹೊನ್ನಳ್ಳಿ ವೀರೇಶ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಜತೆಗೆ ಕಪ್ಪಗಲ್ಲು ಗ್ರಾಮದ ಕುರಿಗಾರರ 4 ಕುರಿಗಳು, ಬೊಮ್ಮಘಟ್ಟದ ಕುರಿಗಾರರ 20 ಕುರಿಗಳು ಸಾವಿಗೀಡಾಗಿವೆ. ಆಲಿಕಲ್ಲುಗಳ ರಾಶಿಯು ಬೀದಿಯಲ್ಲಿ ಮುತ್ತುಗಳನ್ನು ಪೋಣಿಸಿದಂತೆ ಕಾಣಿಸುತ್ತಿತ್ತು. ರಸ್ತೆಯುದ್ದಕ್ಕೂ ಬೆಳ್ಳನೆಯ ಆಲಿಕಲ್ಲುಗಳ ಹಾಸಿಗೆಯೇ ನಿರ್ಮಾಣವಾಗಿತ್ತು ಎಂದು ಕಪ್ಪಗಲ್ಲು ಗ್ರಾಮದ ಬಳಿ ತೋಟ ಹೊಂದಿರುವ ಸಿರಿಗೇರಿ ಪನ್ನರಾಜ್ ತಿಳಿಸಿದ್ದಾರೆ.
ಜಿಲ್ಲೆಯ ಸಂಡೂರು ಮತ್ತಿತರ ಕಡಗಳಲ್ಲೂ ಅಕಾಲಿಕ ಮಳೆ ಸುರಿದ ಕುರಿತು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.