ADVERTISEMENT

ಯಡಿಯೂರಪ್ಪ ಜೈಲು ಸೇರುವುದು ಖಚಿತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 8:20 IST
Last Updated 6 ಆಗಸ್ಟ್ 2012, 8:20 IST

ಆಲಮಟ್ಟಿ: ಬಳ್ಳಾರಿ ಗಣಿ ಧಣಿಗಳು ಜೈಲು ಸೇರಿದ ಹಾಗೆ ರಾಜ್ಯವನ್ನು ಕೊಳ್ಳೆ ಹೊಡೆದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಾ ಜೈಲು ಸೇರುವುದು ಬಹುತೇಕ ಖಚಿತ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಆಲಮಟ್ಟಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರಕಾರದ ಕೆಲವರು ಸೇರಿಕೊಂಡು ಸುಮಾರು ಒಂದು ಲಕ್ಷ ಕೋಟಿ ರೂ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದರು.
 
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳಾದರೂ, ಒಬ್ಬರನ್ನು ಇಳಿಸಲು ಮತ್ತೊಬ್ಬರು ಕಾಲೆಳೆಯುವ ತಂತ್ರ ಅನುಸರಿಸುತ್ತಿದ್ದಾರೆ, ಇದರಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾದರೂ ಸಚಿವರು ಖುರ್ಚಿಗಾಗಿ ಹೋರಾಟ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರ, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿ ಗ್ಯಾಂಗ್ ವಾರ್‌ಗಳು ನಡೆದರೂ ರಾಜ್ಯ ಸರಕಾರ ಇಂಥ ಗಲಭೆಗಳನ್ನು ನಿಯಂತ್ರಿಸಲು ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಇತ್ತೀಚಿಗೆ ಮಂಗಳೂರನಲ್ಲಿ ಹೆಣ್ಣು ಮಕ್ಕಳ ಮೇಲೆ ಗುಂಡಾಗಿರಿ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರ ರಕ್ಷಣೆ ಕಾರ್ಯ ನಡೆದಿದೆ, ಅವರ ವರ್ತನೆ ಮೃಗಕ್ಕಿಂತ ಕೀಳು ಎಂದು ಆರೋಪಿಸಿದರು.

ಸಾಲಮನ್ನಾ: ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲದ ಮನ್ನಾ ಹಣವನ್ನು ಶೀಘ್ರವೇ ಸಹಕಾರಿ ಬ್ಯಾಂಕ್‌ಗಳಿಗೆ ಜಮಾ ಮಾಡಬೇಕು, ಅಂದಾಗ ಮತ್ತೇ ರೈತರು ಹಿಂಗಾರು ಹಂಗಾಮಿಗೆ ಬೆಳೆಗಾಗಿ ಸಾಲ ಪಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೇ ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಹೊಸ ಸಾಲ ನೀಡುವುದೇ ಇಲ್ಲ, ಅದಕ್ಕಾಗಿ ಸಾಲ ಮನ್ನಾದ ಹಣವನ್ನು ಶೀಘ್ರವೇ ಬ್ಯಾಂಕ್‌ಗಳಿಗೆ ಪಾವತಿಸಬೇಕು ಎಂದರು.

ಮಾಜಿ ಸಚಿವ ಹುಲ್ಲಪ್ಪ ಮೇಟಿ, ಆರ್.ಬಿ. ತಿಮ್ಮೋಪೂರ, ಮಾಜಿ ಶಾಸಕ ಜಿ.ಟಿ. ಪಾಟೀಲ, ಡಾ. ದೇವರಾಜ ಪಾಟೀಲ ಮೊದಲಾದವರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.