ADVERTISEMENT

ರಸ್ತೆ ನಿಯಮ ಪಾಲಿಸಲು ಕಿವಿಮಾತು

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 7:45 IST
Last Updated 5 ಜನವರಿ 2012, 7:45 IST

ಕಂಪ್ಲಿ: ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ ಮನವಿ ಮಾಡಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಥಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ರಸ್ತೆ ನಿಯಮ ಉಲ್ಲಂಘಿಸಿದರೆ ಸಾರ್ವ ಜನಿಕರು ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಕಳವು ಮಾಲನ್ನು ಸ್ವೀಕರಿಸುವುದು ಅಪರಾಧ, ಅಜ್ಞಾನವೆ ಅಪಘಾತಕ್ಕೆ ಕಾರಣ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡ ಬಾರದು, ಜನಸಂದಣಿ ಪ್ರದೇಶದಲ್ಲಿ ನಿಮ್ಮ ಆಭರಣ ಮತ್ತು ಹಣ ಬಗ್ಗೆ ಎಚ್ಚರವಿರಲಿ, ದ್ವಿಚಕ್ರ ವಾಹನ ಇಬ್ಬರ ಪ್ರಯಾಣಕ್ಕೆ ಮಾತ್ರ ಎನ್ನುವ ನಾಮ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತ ನಾಗರಿಕರಲ್ಲಿ ಜಾಗೃತಿ ಮೂಡಿಸಿದರು.

ಜಾಗೃತಿ ಜಾಥಾದಲ್ಲಿ ಪಟ್ಟಣದ ಭಾರತಿ ಶಿಶು ವಿದ್ಯಾಲಯ, ಎಸ್.ಎಂ ಸರ್ಕಾರಿ ಪದವಿ ಪೂರ್ವ ಕಾಲೇಜ್, ಓದ್ಸೋ ಜಡೆಮ್ಮ ಗುರುಸಿದ್ದಯ್ಯ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಂಬೇಡ್ಕರ್ ವೃತ್ತದಿಂದ ಎಸ್.ಎಂ ಸರ್ಕಾರಿ ಪದವಿ ಪೂರ್ವ ಕಾಲೇಜ್‌ವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಜಾಥಾ ನಡೆಯಿತು.

ಸಿ.ಪಿ.ಐ ಆರ್. ಹನುಮಂತಪ್ಪ ಮಾತನಾಡಿ, ಕಂಪ್ಲಿ ವೃತ್ತದಲ್ಲಿ 2011ರಲ್ಲಿ 33 ರಸ್ತೆ ಅಪಘಾತ ಪ್ರಕರಣ ದಾಖಲಾಗಿವೆ. ಇದರಲ್ಲಿ 9 ಸಾವು, 67 ಸಣ್ಣ ಪುಟ್ಟ ಗಾಯ ಗಳಾಗಿವೆ. 2 ಹಿಟ್ ಅಂಡ್ ರನ್ ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಿದರೂ ಪತ್ತೆಯಾಗಿಲ್ಲ. ರಸ್ತೆ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ದೂರು ದಾಖಲಿಸಿ ರೂ. 48 ಸಾವಿರ ದಂಡ ವಿಧಿಸಲಾಗಿದೆ ಎಂದು ವಿವರಿಸಿದರು.

ಪಿಎಸ್‌ಐ ಡಾ.ಎಸ್. ಮಲ್ಲಿಕಾರ್ಜುನ ಮಾತನಾಡಿ, ಠಾಣಾ ವ್ಯಾಪ್ತಿಯಲ್ಲಿ ರಸ್ತೆ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ದಂಡ ವಿಧಿಸಲಾಗಿದ್ದು, ಈ ಮೊತ್ತ ರೂ. 96 ಸಾವಿರ ಆಗಿದೆ ಎಂದು ತಿಳಿಸಿದರು.

ಪ್ರೊಬೇಶನರಿ ಪಿಎಸ್‌ಐ ಎಂ.ಎನ್. ಉಮೇಶಕುಮಾರ್, ಜಮೇದಾರ ಗೋಪಾಲಪ್ಪ, ಸಿ. ಕೊಟ್ರೇಶ್, ನಂದೀಶ ಮತ್ತು ಠಾಣಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.