ಸಂಡೂರು: ಕಬ್ಬಿಣದ ಅದಿರನ್ನು `ಇ ಹರಾಜು ಮೂಲಕ~ ಮಾರಾಟ ಮಾಡಲು ಸುಪ್ರೀಂ ಕೋರ್ಟ್ನ ಅರಣ್ಯಪೀಠ ಶುಕ್ರವಾರ ನೀಡಿದ ತೀರ್ಪಿನಿಂದ ಇಲ್ಲಿನ ಗಣಿ ಲಾರಿ ಮಾಲೀಕರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
ಹತ್ತಾರು ಕಠಿಣವಾದ ಷರತ್ತುಗಳೊಂದಿಗೆ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಳಲ್ಲಿ ಗಣಿಗಾರಿಕೆ ನಿಷೇಧಿತ ವೇಳೆ ದಾಸ್ತಾನು ಗೊಂಡಿರುವ 25 ದಶಲಕ್ಷ ಟನ್ ಅದಿರಿನಲ್ಲಿ ಪ್ರತಿ ತಿಂಗಳಿಗೆ 1.5 ದಶಲಕ್ಷ ಟನ್ ಹರಾಜು ಮೂಲಕ ಮಾರಾಟ ಮಾಡಲು ಕೋರ್ಟ್ ತೀರ್ಪು ನೀಡಿರುವುದು ಮೂರು ತಿಂಗಳುಗಳಿಂದ ಅತಂತ್ರವಾಗಿದ್ದ ಲಾರಿ ಉದ್ಯಮಿಗಳಿಗೆ ಸಣ್ಣ ಆಸರೆ ಸಿಕ್ಕಂತಾಗಿದೆ.
ಬಳ್ಳಾರಿ ಜಿಲ್ಲೆಯ ವಿವಿಧ ಗಣಿಗಳಲ್ಲಿ ಸಂಗ್ರವಾಗಿರುವ ಅದಿರಿನ ಪ್ರಮಾಣ 15ದಶಲಕ್ಷ ಟನ್ ಎಂಬ ಅಂದಾಜಿದೆ. ಒಂದು ತಿಂಗಳು ಕಾಲ ಇಲ್ಲಿನ ಲಾರಿಗಳಿಗೆ ಕೆಲಸ ಸಿಗುವುದೆಂಬ ಖಾತರಿ ವ್ಯಕ್ತಪಡಿಸುತ್ತಾರೆ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಬದ್ರುದ್ದೀನ್.
ಸ್ಥಳೀಯ ಉಕ್ಕು ಉದ್ಯಮದ ಬೆಳವಣಿಗೆ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಅರಣ್ಯ ಪೀಠದ ಈ ತೀರ್ಪು ಮುಂದಿನ ದಿನಗಳಲ್ಲಿ ಸಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಹುದೆನ್ನುವ ಆಶಾಭಾವ ಮೂಡಿಸಿದೆ ಎಂಬ ಅನಿಸಿಕೆ ಗಣಿ ಲಾರಿ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ಕೆ.ವಿಜಯ್ ಕುಮಾರ್ ಅವರದ್ದಾಗಿದೆ.
ಅದಿರು ಸಾಗಣೆಗೆ ಸಿಇಸಿ ನಿರ್ದೇಶನದಂತೆ ಇ-ಪರ್ಮಿಟ್ ವ್ಯವಸ್ಥೆ ಜಾರಿ, ಟ್ರಿಪ್ ಶೀಟ್, ವೇಬ್ರಿಡ್ಜ್, ಚೆಕ್ಪೋಸ್ಟ್ ಮತ್ತಿತರ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಯವರು ಕಟ್ಟುನಿಟ್ಟಿನ ನಿರ್ಧಾರ ಜಾರಿಗೆ ತಂದಲ್ಲಿ ಪಾರದರ್ಶಕತೆಯಿಂದಾಗಿ ಆಗುವ ಅಕ್ರಮಗಳನ್ನು ತಡೆಯಬಹುದಾಗಿದೆ. ಆದರೆ ಇದುವರೆಗೂ ಅದಿರು ಶುಲ್ಕದ ರೂಪದಲ್ಲಿ ಸಂಗ್ರಹವಾದ ಹಣ ಅರಣ್ಯ ಅಭಿವೃದ್ಧಿಗೆ ಬಳಕೆಯಾಗದಿರುವುದು ದುರಂತ ಎನ್ನುತ್ತಾರೆ ಸ್ಥಳೀಯ ಗಣಿ ಕಂಪೆನಿಯೊಂದರ ಅಧಿಕಾರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.