ಹೊಸಪೇಟೆ: ಐತಿಹಾಸಿಕ ಹಂಪಿಯ ಹೇಮಕೂಟದಲ್ಲಿ ಮೂಲ ವಿರೂಪಾಕ್ಷೇಶ್ವರನ ವಿಗ್ರಹ ಸ್ಥಾನ ಪಲ್ಲಟಗೊಳಿಸಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ ಎನ್ನಲಾಗಿದೆ.
ಭಕ್ತ ಸಮುದಾಯ ತಂಡೋಪ ತಂಡವಾಗಿ ಆಗಮಿಸಿದ ಘಟನೆಯನ್ನು ವೀಕ್ಷಿಸಿ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವುದಕ್ಕೆ ಗುರುವಾರ ಸಂಜೆ ಹಂಪಿ ಪ್ರವೇಶದ್ವಾರವನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಹಂಪಿ ಉಳಿಸಿ ಆಂದೋಲನಾ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.ವಿರೂಪಾಕ್ಷೇಶ್ವರ ದೇವಾಲಯದ ಬಲಬಾಗದಲ್ಲಿರುವ ಹೇಮಕೂಟದಲ್ಲಿ ಮೂಲ ವಿರೂಪಾಕ್ಷೇಶ್ವರ ಎಂದೇ ಕರೆಯಲ್ಪಡುವ ಶಿವಲಿಂಗ ವಿಗ್ರಹವಿದ್ದು ಅತ್ಯಂತ ಪ್ರಸಿದ್ಧ ಹಾಗೂ ಹೆಚ್ಚು ಆರಾಧನೆಗೆ ಒಳಗಾದ ದೇವಾಲಯ.
ನಿಧಿ ಆಸೆಗಾಗಿ ಕಳ್ಳರು ವಿಗ್ರಹವನ್ನು ಕಿತ್ತು ಗಾರೆಯನ್ನು ತೆರವುಗೊಳಿಸಿ ಕೆಳಗಡೆ ನಿಧಿಯನ್ನು ಶೋಧಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ, ಸದಾ ರಕ್ಷಣಾ ಸಿಬ್ಬಂದಿ ಇರುವ ಈ ಸ್ಥಳದಲ್ಲಿ ಇಂತಹ ಘಟನೆ ನಡೆದಿ ರುವುದಕ್ಕೆ ಇಲಾಖೆಗಳ ಮೇಲೆ ಅನುಮಾನ ವ್ಯಕ್ತವಾಗುತ್ತದೆ. ಘಟನೆಯ ಕಾರಣ ತಿಳಿಯಬೇಕು ತಕ್ಷಣವೇ ಅವರನ್ನು ಶಿಕ್ಷೆಗೆ ಗುರಿ ಪಡಿಸ ಬೇಕು, ಮುಂದೆ ಇಂತಹ ದುರ್ಘಟನೆ ಗಳು ನಡೆಯದಂತೆ ನೋಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಹಂಪಿ ಉಳಿಸಿ ಆಂದೋಲನಾ ಸಮಿತಿ ಅನಿಲ್ ನಾಯ್ಡು, ರಾಜವಂಶಜ ಕೃಷ್ಣದೇವರಾಯ, ಹಿಂದೂ ಪರ ಸಂಘಟನೆಗಳ ಮುಖಂಡರು ಹಂಪಿಯ ಪ್ರವೇಶದ್ವಾರವನ್ನು ತಡೆದು ಪ್ರತಿಭಟನೆ ನಡೆಸಿದರು.
ಭೇಟಿ: ಪ್ರತಿಭಟನೆಯ ವಿಷಯ ತಿಳಿಯುತ್ತಲೇ ಸಂಜೆ ಹಂಪಿ ಪ್ರಾಧಿಕಾರ ಆಯುಕ್ತ ಮತ್ತು ಹೊಸಪೇಟೆ ಉಪ ವಿಭಾಗದ ಕರೀಗೌಡ, ತಹಸೀಲ್ದಾರ ಪಿ.ಎಸ್.ಮಂಜುನಾಥ, ಡಿವೈಎಸ್ಪಿ ರಶ್ಮಿ ಪರಡ್ಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಈ ಕುರಿತು ತನಿಖೆ ನಡೆಸಿ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.