ADVERTISEMENT

ಶರನ್ನವರಾತ್ರಿ ಹಬ್ಬಕ್ಕೆ ಸಂಭ್ರಮದ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 10:20 IST
Last Updated 1 ಅಕ್ಟೋಬರ್ 2011, 10:20 IST

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಸುಕ್ಷೇತ್ರ ನಂದೀಪುರದಲ್ಲಿ ಶುಕ್ರವಾರ ಶರನ್ನವರಾತ್ರಿ ಹಬ್ಬದ ಆಚರಣೆ ನಿಟ್ಟಿನಲ್ಲಿ ದುರ್ಗಾ ಮೂರ್ತಿಗೆ ವಿಶೇಷ ಪೂಜೆ ಹಾಗು ಜ್ಯೋತಿ ದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.

ಎರಡು ದಿನಗಳಿಂದ ಸುಕ್ಷೇತ್ರದ ಗುರು ದೊಡ್ಡ ಬಸವೇಶ್ವರ ದೇವಸ್ಥಾನ ದಲ್ಲಿ ದುರ್ಗಾ ಪೂಜಾ ಅನುಷ್ಠಾನದಲ್ಲಿ ತೊಡಗಿಕೊಂಡಿರುವ ಗುರು ಮಹೇಶ್ವರ ಸ್ವಾಮೀಜಿ ಸದ್ಭಕ್ತರಿಗೆ ನವರಾತ್ರಿ ಜ್ಯೋತಿಯ ದರ್ಶನವನ್ನು ಒದಗಿಸಿ ದರು. ಸಾವಿರಾರು ಸದ್ಭಕ್ತರು ಜ್ಯೋತಿ ದರ್ಶನ ಪಡೆದರು.

ದೊಡ್ಡ ಬಸವೇಶ್ವರ ಸೇವಾ ಸಮಿತಿಯ ಚಿತ್ರಗಾರ ರುದ್ರಪ್ಪ ಈ ಸಂದರ್ಭದಲ್ಲಿ ಮಾತನಾಡಿ, ಸಮುದಾಯದಲ್ಲಿ ಧಾರ್ಮಿಕ ಶ್ರದ್ಧೆಗಳು ಜಾಗೃತವಾಗುತ್ತಿವೆ. ಈ ಭಾಗದ ಸಮುದಾಯದ ನಂಬಿಕೆಯಾದ ಜ್ಯೋತಿ ದರ್ಶನ ಪಡೆಯಲು  ಆಗಮಿಸುತ್ತಿರುವ ಭಕ್ತರ ಸಂಖ್ಯೆಯಲ್ಲಿ ವರ್ಷ ವರ್ಷ ಪ್ರಗತಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಒಟ್ಟು 9 ದಿನಗಳ ಕಾಲ ನಡೆಯುವ ಜ್ಯೋತಿ ದರ್ಶನಕ್ಕೆ ನಾಡಿನ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ ಎಂದು ತಿಳಿಸಿದರು.

ನವರಾತ್ರಿಯ ಅಂಗವಾಗಿ ನಡೆಯುವ ಪುರಾಣ ಕಾರ್ಯಕ್ರಮವನ್ನು ಮುಂಡರಗಿಯ ಕೊಟ್ರಪ್ಪ ಶಾಸ್ತ್ರಿ ನಡೆಸಿ ಕೊಡುತ್ತಾರೆ. ವೇದಮೂರ್ತಿಗಳಾದ ಹಾಲಯ್ಯ ಶಾಸ್ತ್ರಿ, ಗಂಗಾಧರ ಶಾಸ್ತ್ರಿ ಮತ್ತು ಚಂದ್ರಶೇಖರ ಶಾಸ್ತ್ರಿ ಪುರಾಣ ಸಂಯೋಜಕರಾಗಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ದೇವೇಂದ್ರ ರೆಡ್ಡಿ ತಬಲಾ ಸಾಥ್ ನೀಡುತ್ತಾರೆ.

ಸೇವಾ ಸಮಿತಿಯ ಕೊಟ್ರಗೌಡ, ಬನ್ನಿಗೋಳು ವೆಂಕಣ್ಣ, ಪತ್ರೇಶ್ ಹಿರೇ ಮಠ, ಬ್ಯಾಸಿಗದೇರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಯಮುನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.