ADVERTISEMENT

ಶಾಸಕ ನೇಮರಾಜ ನಾಯ್ಕ ರಾಜೀನಾಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 5:20 IST
Last Updated 7 ಜನವರಿ 2012, 5:20 IST

ಬಳ್ಳಾರಿ: `ಬಸವ~ ವಸತಿ ಯೋಜನೆ ಅಡಿ ಮನೆ ಹಂಚಲು ಫಲಾನುಭವಿಗಳನ್ನು ಆಯ್ಕೆ ಮಾಡುವ ಅಧಿಕಾರ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಇಲ್ಲ. ಅದೇನಿದ್ದರೂ ಶಾಸಕರಿಗೇ ಬಿಟ್ಟ ವಿಚಾರ ಎಂದು ಹೇಳಿಕೆ ನೀಡಿರುವ ಹಗರಿ ಬೊಮ್ಮನಹಳ್ಳಿ ಶಾಸಕರಿಗೆ ನಿಯಮಗಳ ಅರಿವು ಇದ್ದಂತಿಲ್ಲ. ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ಸದಸ್ಯರು ಆಗ್ರಹಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ಕೋರಿದ ಅವರು, ಮನೆಗಳ ಫಲಾನುಭವಿಗಳ ಆಯ್ಕೆ ಕುರಿತ ಜಾಗೃತಿ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರೇ ಸಂಪೂರ್ಣ ಅಧಿಕಾರ ಹೊಂದಿದ್ದು, ಈ ಕುರಿತು ವಿರೋಧ ಪಕ್ಷಗಳಿಗೆ ತಿಳಿವಳಿಕೆ ಇಲ್ಲ. ಇಲ್ಲಸಲ್ಲದ ಆರೋಪ ಮಾಡು ವುದು ಸರಿಯಲ್ಲ ಎಂದು ಹೇಳಿರುವ ನೇಮರಾಜ ನಾಯ್ಕ ಅವರಿಗೆ ನಿಯಮ ಗಳ ಬಗ್ಗೆ ತಿಳಿವಳಿಕೆಯೇ ಇದ್ದಂತಿಲ್ಲ ಎಂದರು.

`ಬಸವ~ ವಸತಿ ಯೋಜನೆ ಅಡಿ ಫಲಾನುಭವಿಗಳ ಆಯ್ಕೆಗೆ ಗ್ರಾಮ ಸಭೆ ನಡೆಸುವ ಅಗತ್ಯವಿಲ್ಲ. ಶಾಸಕರೇ ಅಧ್ಯಕ್ಷರಾಗಿರುವ ಸಮಿತಿ ಸ್ವತಂತ್ರವಾಗಿ ಆಯ್ಕೆ ಮಾಡುತ್ತದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿಗೆ ಶಾಸಕರ ನೇತೃತ್ವದ ಜಾಗೃತಿ ಸಮಿತಿ ಮಂಜೂರಾತಿ ನೀಡಬೇಕು ಎಂಬ ನಿಯಮ ಕತ್ತೆಗಳಿಗೂ ಗೊತ್ತಿದೆ. ಇಂತಹ ಮಹತ್ವದ ನಿಯಮವೇ ಗೊತ್ತಿಲ್ಲದಿದ್ದರೆ ಅವರು ಶಾಸಕ ಸ್ಥಾನದಲ್ಲಿ ಮುಂದುವರಿ ಯಲು ಅರ್ಹರಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ಸದಸ್ಯರಾದ ಭೀಮಾ ನಾಯ್ಕ, ವಾಸು, ಲಕ್ಷ್ಮಣ್, ಶಶಿಧರ ಮತ್ತಿತರರು ಆಗ್ರಹಿಸಿದರು.

`ಶಾಸಕರ ರಾಜೀನಾಮೆ ಕೇಳುವ ವೇದಿಕೆ ಇದಲ್ಲ. ಈ ಕುರಿತು ಪ್ರತ್ಯಕವಾಗಿ ಆಗ್ರಹಿಸಿ~ ಎಂದು ಜಿ.ಪಂ. ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ ತಿಳಿಸಿದರಲ್ಲದೆ, ಆಶ್ರಯ, ಬಸವ, ಅಂಬೇಡ್ಕರ್ ವಸತಿ ಯೋಜನೆ ಅಡಿ ಮನೆ ಹಂಚುವುದಕ್ಕೆ ಗ್ರಾಮಗಳಲ್ಲಿ ವಾರ್ಡ್ ಸಭೆ ನಡೆಸುವ ಮೂಲಕ, ಆ ಸಭೆಯ ವೀಡಿಯೊ ಚಿತ್ರೀಕರಣ ಮಾಡಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಯವರು ನಂತರ ಸಿ.ಡಿ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ ನಾಯಕ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.