ADVERTISEMENT

ಶೀಘ್ರ ಕ್ರೀಡಾಂಗಣ ನಿರ್ಮಾಣ: ನೇಮಿರಾಜ್ ನಾಯ್ಕ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 5:35 IST
Last Updated 21 ಸೆಪ್ಟೆಂಬರ್ 2011, 5:35 IST

ಮರಿಯಮ್ಮನಹಳ್ಳಿ:  ಕ್ರೀಡಾಪಟುಗಳ ಹಿತದೃಷ್ಟಿಯಿಂದ ಹಾಗೂ ಕ್ರೀಡೆಗಳ ಅಭಿವೃದ್ಧಿಗಾಗಿ ಪಟ್ಟಣದಲ್ಲಿ ಇದೇ ಸಾಲಿನಲ್ಲಿ ಶೀಘ್ರ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆ ಯೋಜನೆ ಹಮ್ಮಿಕೊಂಡಿದ್ದು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹಗರಿಬೊಮ್ಮನಹಳ್ಳಿ ವಿಧಾನ ಸಭ ಕ್ಷೇತ್ರದ ಶಾಸಕ ಕೆ.ನೇಮಿರಾಜ್ ನಾಯ್ಕ ಭರವಸೆ ನೀಡಿದರು.

ಅವರು ಪಟ್ಟಣದಲ್ಲಿ ಸೋಮವಾರದಿಂದ ಆರಂಭವಾದ ಎರಡು ದಿನಗಳ ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ- 2011 ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರದ ವ್ಯಾಪ್ತಿಯ ಹಗರಿಬೊಮ್ಮನಹಳ್ಳಿಯಲ್ಲಿ 2.5ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮತ್ತು ಕೊಟ್ಟೂರುನಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣದ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.

ಅಲ್ಲದೆ ಕ್ಷೇತ್ರದ ವ್ಯಾಪ್ತಿಯು ಒಂದು ರೀತಿಯಲ್ಲಿ ಕ್ರೀಡಾಕೂಟಗಳ ತವರೂರಾಗಿದ್ದು, ಮರಿಯಮ್ಮನಹಳ್ಳಿಯಲ್ಲಿ ಇದೇ ಡಿಸೆಂಬರ್ ತಿಂಗಳಲ್ಲಿ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಇತರ ರಾಜ್ಯಗಳ 60 ತಂಡಗಳು ಭಾಗವಹಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ರಾಜ್ಯದ ಎರಡು ತಂಡಗಳು ಪ್ರತಿನಿಧಿಸಲಿವೆ ಎಂದರು.

ಕ್ಷೇತ್ರದಲ್ಲಿ ಕ್ರೀಡೆಗಳಿಗೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಇತರೆ ಚಟುವಟಿಕೆಗಳಿಗೆ ಹೆಸರುಗಳಿಸಿದ್ದು, ಕ್ರೀಡಾಕೂಟದಲ್ಲಿ  ಪ್ರೇಕ್ಷಕರು ಶಿಸ್ತು ಕಾಪಾಡುವುದರೊಂದಿಗೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕೆಂದರು. ಅಲ್ಲದೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಉದ್ಯಾನ ನಿರ್ಮಾಣಕ್ಕೆ ಸದ್ಯ ಚಾಲನೆ ನೀಡಲಾಗುವುದು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಎಚ್. ಬಾಲರಾಜ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿ. ಎಸ್. ಮಂಜುಳಬಾಯಿ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡಿದರು. ಕೊಟ್ಗಿ ನಾಗಪ್ಪ, ಡಿ. ರಾಘವೇಂದ್ರ ಶೆಟ್ಟಿ, ಪಿ.ಓಬಪ್ಪ, ಎಂ.ಬದರೀನಾಥ ಶೆಟ್ಟಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಚಾರ್ಯ ಕೆ.ಲಕ್ಷ್ಮಣ್, ತಾ.ಪಂ.ಸದಸ್ಯ ಎಚ್.ಲಕ್ಷ್ಮಣ, ಡಣಾಪುರ ಗ್ರಾ.ಪಂ.ಅಧ್ಯಕ್ಷ ಎನ್.ಮುದುಕಪ್ಪ, ಜಿ.ನಾಗಲಾಪುರ ಗ್ರಾ.ಪಂ.ಅಧ್ಯಕ್ಷ ಈ.ಶ್ರೀನಿವಾಸ, ರಾಮಾನಾಯ್ಕ, ಯು.ಕೊಟ್ರೇಶ್‌ನಾಯ್ಕ, ಹಗರಿಬೊಮ್ಮನಹಳ್ಳಿ ಎಪಿಎಂಸಿ ಅಧ್ಯಕ್ಷ ರೋಹಿತ್, ಪಿಎಸ್‌ಐ ಆರ್.ಎಲ್.ಮೋತಿಲಾಲ್, ತೇನ್‌ಸಿಂಗ್ ನಾಯ್ಕ, ಪಿ.ಕಾಸಿಂಸಾಹೇಬ್, ಗುಂಡಾಚಾರ್, ಕೆಂಚಣ್ಣನವರ್, ಬಸವನಗೌಡ್ರು. ಡಿಶ್ ಮಂಜುನಾಥ, ಸೂರ್ಯಬಾಬು, ಎನ್. ಸತ್ಯ ನಾರಾಯಣ, ರಾಜಣ್ಣ, ಈರೇಶ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ. ಜೋಷಿ ಸ್ವಾಗತಿಸಿದರು. ನಂದಿನಿ ಪ್ರಮಾಣ ವಚನ ಬೋಧಿಸಿದರು. ಕ್ರೀಡಾಕೂಟದಲ್ಲಿ ಜಿಲ್ಲೆಯ 7 ತಾಲ್ಲೂಕಿನ ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.