ಕೂಡ್ಲಿಗಿ: ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಪಟ್ಟಣದ ಮದಕರಿ ವೃತ್ತದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಇದರಿಂದ ಸಾರ್ವಜನಿಕರು ಶೌಚಾಕ್ಕಾಗಿ ಪರದಾಡುವಂತಾಗಿದ್ದು, ಶೌಚಾಲಯ ಪಕ್ಕದ ಬಯಲೇ ಶೌಚಾಲಯವಾಗಿ ಮಾರ್ಪಟ್ಟಿದೆ.
‘ಶೌಚ ಗುಂಡಿ ತುಂಬಿದ್ದು, ಖಾಲಿ ಮಾಡಿಲ್ಲವಾದ್ದರಿಂದ ಸಮಸ್ಯೆ ಎದುರಾಗಿದೆ. ಜನರು ಬಯಲಲ್ಲೇ ಮಲ– ಮೂತ್ರ ವಿಸರ್ಜಿಸುವುದರಿಂದ ದುರ್ನಾತ ಬೀರುತ್ತಿದೆ. ಈ ಕುರಿತು ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎಂದು ಆಟೊ ಚಾಲಕ ಕುಮಾರಸ್ವಾಮಿ, ಸ್ಥಳೀಯರಾದ ಬಿ. ಶಿವಶಂಕರ್, ಜೆ. ನರಸಿಂಹ, ಬಸವಣ್ಣಿ ದೂರಿದರು.
‘ಶೌಚಾಲಯದ ಗುಂಡಿ ಖಾಲಿ ಮಾಡಿಸಲು ಹೊಸಪೇಟೆಯಿಂದ ಸಕ್ಕಿಂಗ್ ಯಂತ್ರ ಕಳುಹಿಸುವಂತೆ ಕೋರಲಾಗಿದೆ. ಇನ್ನೆರಡು ದಿನಗಳಲ್ಲಿ ಕೆಲಸ ಪೂರ್ಣಗೊಳಿಸಿ ಶೌಚಾಲಯವನ್ನು ಸಾರ್ವಜನಿಕರಿಗೆ ಮುಕ್ತ ಮಾಡಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಉಮೇಶ್ ಹಿರೇಮಠ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.