ADVERTISEMENT

ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಉಪಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 8:25 IST
Last Updated 6 ಜನವರಿ 2012, 8:25 IST

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮೋರಿಗೇರಿ ಗ್ರಾಮಕ್ಕೆ ಮಂಗಳವಾರ ತಾ.ಪಂ.ಉಪಾಧ್ಯಕ್ಷೆ ಭಾರತಿ ಬೆಲ್ಲದ ಅನಿರೀಕ್ಷಿತ ಭೇಟಿ ನೀಡಿ ಸರಕಾರಿ ಆಸ್ಪತ್ರೆ ಸೇರಿದಂತೆ ಮತ್ತಿತರೆಡೆ ತೆರಳಿ ಪ್ರಗತಿ ಪರಿಶೀಲನೆ ನಡೆಸಿದರು.

ಸರಕಾರಿ ಆಸ್ಪತ್ರೆಗೆ ತೆರಳಿ ಹಾಜರಾತಿ ಪುಸ್ತಕ ಪರಿಶೀಲಿಸುತ್ತಿದ್ದಾಗ, ಅಲ್ಲಿನ ಆಯುಷ್ ವೈದ್ಯಾಧಿಕಾರಿ ಡಾ.ಸಿದ್ಧ ರಾಮಯ್ಯ, ಆಸ್ಪತ್ರೆಯ ಸಿಬ್ಬಂದಿ ಪಿ.ಜಿ.ಕುಮಾರ್(ವಾಹನ ಚಾಲಕ) ಪದೇ ಪದೇ ಕೆಲಸಕ್ಕೆ ಗೈರು ಹಾಜರಾಗು ವುದಲ್ಲದೆ ವೈದ್ಯರಿಲ್ಲದ ಸಮಯದಲ್ಲಿ ಗೈರು ಹಾಜರಾಗಿರುವುದನ್ನು ತಿದ್ದುಪಡಿ ಮಾಡಿರುವುದನ್ನು ಉಪಾಧ್ಯಕ್ಷರ ಗಮನಕ್ಕೆ ತಂದರು.

ಆಸ್ಪತ್ರೆಯ ಆವರಣದಲ್ಲಿರುವ ಸಿಬ್ಬಂದಿ ವಸತಿ ಗೃಹಗಳನ್ನು ಸರಕಾರ ಸ್ವಾಮ್ಯಕ್ಕೆ ತೆಗೆದುಕೊಳ್ಳದೇ ಇರುವ ಕುರಿತು ಬೇಸರ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ದೂರವಾಣಿಯ ಮೂಲಕ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ರೆಡ್ಡಿಯವರಿಗೆ ಆದೇಶ ನೀಡಿದರು.

ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ತೆರಳಿ ಗ್ರಾ.ಪಂ.ಅಧ್ಯಕ್ಷ, ಸದಸ್ಯ ರೊಂದಿಗೆ ಊಟವನ್ನು ಸೇವಿಸುವ ಮೂಲಕ ಬಿಸಿಯೂಟದ ವ್ಯವಸ್ಥೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಶಾಲೆಗೆ ಶಿಕ್ಷಕರು ತಡವಾಗಿ ಬರುತ್ತಿದ್ದಾರೆ ಎಂದು ಸಾರ್ವಜನಿಕರು  ದೂರಿದರು. ಮುಖ್ಯೋಪಾಧ್ಯಾಯರಿಗೆ ಸೂಕ್ತ ಜರುಗಿಸಲು ಸೂಚಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ತೆರಳಿದಾಗ ಸಿಬ್ಬಂದಿ ಇಲ್ಲದೇ ನಿಲಯಕ್ಕೆ ಬೀಗಮುದ್ರೆ  ಹಾಕಿದ್ದನ್ನು ಗಮನಿಸಿ ಆಶ್ಚರ್ಯ ವ್ಯಕ್ತಪಡಿಸಿದರು. ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಮಾಣಿಕ್ಯಾಚಾರಿ ಅವರಿಗೆ ಮಾಹಿತಿ ನೀಡಿ ಪರಿಶೀಲಿಸಿ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಆದೇಶ ನೀಡಿದರು.

ಸರಕಾರಿ ಪ್ರೌಢಶಾಲೆಗೆ ತೆರಳಿ ಹಾಜರಾತಿ ಪರಿಶೀಲಿಸಿ ಕೋಣೆಗಳಲ್ಲಿ ಹೆಚ್ಚಿನ ಸ್ವಚ್ಛತೆ ಕಾಪಾಡಲು ಹೇಳಿ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಕಂಪ್ಯೂಟರ್ ತರಗತಿಗಳನ್ನು ನಡೆಸಲು ಪ್ರಭಾರ ಮುಖ್ಯೋಪಾಧ್ಯಾಯ ಕುಮಾರಸ್ವಾಮಿಗೆ  ಆದೇಶ ನೀಡಿದರು.

ಶಾಲೆಗೆ ಮುಖ್ಯ ಗುರುಗಳ ಹುದ್ದೆ ಸೇರಿದಂತೆ ಹೆಚ್ಚಿನ ಕಂಪ್ಯೂಟರ್ ಒದಗಿಸಲು ಸಂಬಂಧಪಟ್ಟ ಅದಿಕಾರಿ ಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಲ್ಲೂಕು ಮಾನವ ಹಕ್ಕುಗಳ ಜನಪರ ಸಂಘದ ಅಧ್ಯಕ್ಷ ಡಾ.ಶಿವ ಕುಮಾರ್ ಬೆಲ್ಲದ, ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಸೋಮ ಶೇಖರ್, ಸದಸ್ಯರಾದ ಜಯಪ್ಪ, ಕೊಟ್ರೇಶ್, ಲಕ್ಷ್ಮೀದೇವಿ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶರಣಬಸವನ ಗೌಡ, ಕಾರ್ಯದರ್ಶಿ ಜಗದೀಶ್ವರ ಸ್ವಾಮಿ ಮತ್ತಿತರರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.