ADVERTISEMENT

ಸುಶಿಕ್ಷಿತರಾಗದೇ ಸೌಲಭ್ಯ ಸಿಕ್ಕುವುದು ಕಷ್ಟ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 5:05 IST
Last Updated 13 ಫೆಬ್ರುವರಿ 2012, 5:05 IST

ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮ ಸಾಲಿ ಸಮಾಜದವರು ಶೈಕ್ಷಣಿಕವಾಗಿ ಅತಂತ್ರಗೊಂಡಿದ್ದಾರೆ. ಶಿಕ್ಷಣದಲ್ಲಿ ಹಿಂದುಳಿದ ಪರಿಣಾಮವಾಗಿ ಸಮಾಜಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಖೇದ ವ್ಯಕ್ತಪಡಿಸಿದರು.

ಪಟ್ಟಣದ ಕೆಚ್ಚಿನಬಂಡಿ ರಸ್ತೆಯಲ್ಲಿ ಇರುವ ನಿವೇಶನದಲ್ಲಿ ಪಂಚಮಸಾಲಿ ಸಂಘದ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳು ಭಾನುವಾರ ಆಯೋಜಿಸಿದ್ದ ಪಂಚಮಸಾಲಿ 4ನೇ ಜಿಲ್ಲಾ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡಿ, ಶೈಕ್ಷಣಿಕವಾಗಿ ಅಭ್ಯುದಯವಾಗದಿದ್ದರೆ ಸಮಾಜದ ಭವಿಷ್ಯ ರೂಪಿಸಲು ಸಾಧ್ಯ ಆಗುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.

ಹೆಚ್ಚಾಗಿ ಕೃಷಿ ಮೇಲೆ ಅವಲಂಬಿತ ರಾಗಿರುವ ಸಮಾಜ ಬಾಂಧವರಲ್ಲಿ ಬಹುತೇಕರು ಸಾಲದ ಸುಳಿಯಲ್ಲಿ ಸಿಲುಕಿದ್ದು ಆಸ್ತಿ ಕಳೆದುಕೊಳ್ಳುವಂತಹ ಸ್ಥಿತ್ಯಂತರಕ್ಕೊಳಗಾಗಿದ್ದಾರೆ. ಮಕ್ಕಳ ಶಿಕ್ಷಣದಲ್ಲಿಯಾದರೂ ಪ್ರಗತಿ ಸಾಧಿಸಿ ಅವರನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ ಅಭ್ಯುದಯ ಹೊಂದಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶಗಳ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ಕಾರ್ಯಾಗಾರ ನಡೆಸಲು ಚಿಂತಿಸ ಲಾಗಿದೆ. ಸಮಾಜದ ಮುಖಂಡರು ಉದ್ದಿಮೆ ನೀತಿ ರೂಪಿಸಲು ಮುಂದೆ ಬಂದರೆ ನೆರವು ನೀಡಲಾಗುವುದು ಎಂದರು.

ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ಸಮಾಜದ ಪಾಲಿಗೆ ಸಂಘರ್ಷ ಹಾಗೂ ಹೋರಾಟದ ಕಾಲ ಮುಗಿದಿದೆ. ಈಗ ಸಂತೃಪ್ತಿಯ ಕಾಲಘಟ್ಟದಲ್ಲಿ ಸಮಾಜ ವಿದೆ. ರಾಜ್ಯದಾದ್ಯಂತ ತಾಲ್ಲೂಕು ಮತ್ತು ಜಿಲ್ಲಾ ಘಟಕಗಳನ್ನು ಹೊಂದುವ ಮೂಲಕ ಪಂಚಮಸಾಲಿ ಸಮಾಜ ಸಂಘಟಿತಗೊಂಡ ಸಮಾಜ ಎಂದು ಘೋಷಿಸಿದರು.

ಸಮಾಜದ ಜಗದ್ಗುರುಗಳ ಮುಂದಿನ ವರ್ಷದ ಪೀಠಾರೋಹಣ ಮಹೋತ್ಸವ ಪಟ್ಟಣದ ನಮ್ಮ ಸ್ವಂತ ಸಮುದಾಯ ಭವನದಲ್ಲಿ ಜರುಗಿಸುವ ಅಗತ್ಯತೆ ಇದೆ ಎಂದು ಪ್ರತಿಪಾದಿಸಿದ ಅವರು ಈ ನಿಟ್ಟಿನಲ್ಲಿ ಶಾಸಕರಾದ ನೇಮರಾಜ ನಾಯ್ಕ ಕೂಡಲೇ ಅಗತ್ಯ ಅನುದಾನ ಒದಗಿಸಿ ಸಮುದಾಯ ಭವನದ ಕಟ್ಟಡ ಕಾಮಗಾರಿ ಪೂರ್ಣಗೊಳಿಸಬೇಕು. ಆ ಮೂಲಕ ಸಮಾಜಕ್ಕೆ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ಎಚ್ಚರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬೊಪ್ಪ ಖಾನ್ ಕುಮಾರಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದ ಸಾನ್ನಿಧ್ಯ ವಹಿಸಿದ್ದ ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಸ್ವಾಮಿ ಮತ್ತು ಚರ ಪೀಠಾಧಿಪತಿ ಸಿದ್ಧಲಿಂಗಸ್ವಾಮಿ ಅವರನ್ನು ಹಳೇ ಹಗರಿಬೊಮ್ಮನ ಹಳ್ಳಿಯ ನೀರಾವರಿ ಇಲಾಖೆ ಆವರಣ ದಲ್ಲಿರುವ ಆಂಜನೇಯ ದೇವಸ್ಥಾನ ದಿಂದ ಸಮಾವೇಶ ನಡೆಯುವ ಸ್ಥಳಕ್ಕೆ ಮೆರವಣಿಗೆಯ ಮೂಲಕ ಕರೆ ತರಲಾಯಿತು. ಕುಂಭಗಳನ್ನು ಹೊತ್ತಿದ್ದ ಸಾವಿರಕ್ಕೂ ಹೆಚ್ಚು ಮಹಿಳೆಯರು ಮತ್ತು ನಾನಾ ಜಾನಪದ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು.

ಆರೂಢ ಆಶ್ರಯ ಮಠದ ಯೋಗೀಶ್ವರ ತಾಯಿ, ಸಂಸದೆ ಜೆ.ಶಾಂತಾ, ಶಾಸಕರಾದ ನೇಮರಾಜ್ ನಾಯ್ಕ, ಚಂದ್ರಾ ನಾಯ್ಕ, ಮೃತ್ಯುಂ ಜಯ ಜಿನಗಾ, ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ಪಂಚಮಸಾಲಿ ಜಗದ್ಗುರು ಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ ಸಹಿತ ಸಮಾಜದ ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸುರೇಶ್ ದೇವರಗುಡ್ಡ ಪ್ರಾರ್ಥಿಸಿ ದರು. ತಾಲ್ಲೂಕು ಘಟಕದ ಅಧ್ಯಕ್ಷ ಅಕ್ಕಿ ಶಿವಕುಮಾರ್ ಪ್ರಾರ್ಥಿಸಿದರು. ಶೈಲಜಾ ಶಿವಕುಮಾರ್ ಮತ್ತು ಬಾಚಿಗೊಂಡನ ಹಳ್ಳಿ ಶೈಲಜಾ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.