ಕೂಡ್ಲಿಗಿ: ತಾಲ್ಲೂಕಿನಲ್ಲಿ ಕೆಲವು ಗ್ರಾಮಗಳು ಇದುವರೆಗೂ ಸೌಲಭ್ಯವಂಚಿತವಾಗಿದ್ದು, ಅವುಗಳಲ್ಲಿ ತಾಲ್ಲೂಕು ಕೇಂದ್ರದಿಂದ ಸಮೀಪವಿರುವ ಬೀರಲಗುಡ್ಡ ಗ್ರಾಮವೂ ಒಂದಾಗಿದೆ. ಇಡೀ ಗ್ರಾಮ ಕೊಳಚೆಯಿಂದ ನರಳುತ್ತಿದೆ.
ಗ್ರಾಮದಲ್ಲಿ ಮುಖ್ಯವಾಗಿ ಕುಡಿಯುವ ಶುದ್ಧ ನೀರು ದೊರೆಯದೇ ಇರುವುದು. ಫ್ಲೋರೈಡ್ ಮಿಶ್ರಿತ ನೀರನ್ನೇ ಗ್ರಾಮಸ್ಥರು ಕುಡಿಯಬೇಕಾಗಿರುವುದರಿಂದ ಅನೇಕ ಕಾಯಿಲೆಗಳಿಂದಾಗಿ ಜನತೆ ಬಳಲುತ್ತಿದ್ದಾರೆ. ನೀರು ಸರಬರಾಜಿನ ಪೈಪುಗಳು ಒಡೆದು ಕಲುಷಿತ ನೀರು ಮಿಶ್ರಣಗೊಳ್ಳುತ್ತಿರುವುದರಿಂದಲೂ ಗ್ರಾಮಸ್ಥರು ಕಂಗೆಟ್ಟಿದ್ದಾರೆ.
ಚರಂಡಿಗಳು ಸ್ವಚ್ಛಗೊಳ್ಳದೆ ನೀರು ನಿಲ್ಲುತ್ತಿರುವುದರಿಂದ ಕಲುಷಿತ ನೀರಿನಿಂದಾಗಿ ಸೊಳ್ಳೆಗಳ ಹಾವಳಿ ಅತಿಯಾಗಿದೆ. ಚರಂಡಿಯ ನೀರೂ ಸಹ ದುರ್ವಾಸನೆ ಬೀರುವುದರಿಂದ ಜನತೆ ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿಯಿದೆ. ಅಲ್ಲದೆ ಚರಂಡಿಯ ಪಕ್ಕವೇ ನೀರಿನ ತೊಟ್ಟಿ, ಶಾಲೆಯ ಹಿಂದೆ ಚರಂಡಿ ಇರುವುದರಿಂದ ಮಕ್ಕಳಿಗೂ ಇದು ಪರಿಣಾಮ ಬೀರುವಂತಾಗಿದೆ. ಗ್ರಾಮದಲ್ಲಿ ಚರಂಡಿಯ ಸುವ್ಯವಸ್ಥೆ ಇಲ್ಲದಿರುವುದರಿಂದಾಗಿ ಮನೆಗಳ ಕೊಳಚೆ ನೀರು ರಸ್ತೆ ಮಧ್ಯ ಹರಿಯುತ್ತಿದೆ. ಮಹಿಳೆಯರಿಗೆ ಶೌಚಾಲಯ ಇಲ್ಲದಿರುವುದರಿಂದ ರಸ್ತೆ ಬದಿ, ಬಯಲು ಅವರಿಗೆ ಅನಿವಾರ್ಯವಾಗಿದೆ. ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಬಾಗಿಲೇ ಇಲ್ಲ. ಕಿಟಕಿ ದುಃಸ್ಥಿತಿಯಲ್ಲಿದೆ. ಮುಖ್ಯವಾಗಿ ಬೀರಲಗುಡ್ಡ ಗ್ರಾಮದಿಂದ ಮೊರಬನಹಳ್ಳಿ ಗ್ರಾಮದ ಮೂಲಕ ತಾಲ್ಲೂಕು ಕೇಂದ್ರವನ್ನು ಸೇರುವ ಸುಲಭ ಮಾರ್ಗವಿದೆ. ಆದರೆ ರಸ್ತೆ ನಿರ್ಮಾಣಗೊಂಡಿಲ್ಲವೆಂಬುದು ಗ್ರಾಮಸ್ಥರ ಅಳಲು.
ಗ್ರಾಮದ ದುಃಸ್ಥಿತಿಯನ್ನು ಶೀಘ್ರವೇ ಪರಿಹರಿಸದಿದ್ದಲ್ಲಿ ಹೋರಾಟ ಕೈಗೊಳ್ಳಬೇಕಾಗುವುದು ಎಂದು ಎಐಎಸ್ಎಫ್ ಸಂಘಟನೆ ಹಾಗೂ ಗ್ರಾಮಸ್ಥರಾದ ಬಿ.ಸುರೇಶ್, ಕೆ.ಮೂಗಪ್ಪ, ಓಬಳೇಶ, ತಿಪ್ಪೇಸ್ವಾಮಿ, ಟಿ.ಮಂಜುನಾಥ, ಪಂಪಾಪತಿ, ಜಿ.ನಾಗಭೂಷಣ, ಬಿ.ಬಸವರಾಜ, ಈರಣ್ಣ ಮೊದಲಾದವರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.