ADVERTISEMENT

ಹಿರಿಯರ `ಓಪಿಡಿ' ಉತ್ತಮ ಸೇವೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 5:29 IST
Last Updated 4 ಜುಲೈ 2013, 5:29 IST

ಬಳ್ಳಾರಿ: ಸ್ಥಳೀಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ) ಯ ಆಸ್ಪತ್ರೆಗೆ ಚಿಕಿತ್ಸೆಗೆ ಆಗಮಿಸುವ ವಯೋ ವೃದ್ಧರು ಕಿರಿಯರೊಂದಿಗೆ ಕಾದು ಸುಸ್ತಾಗುವುದನ್ನು ತಪ್ಪಿಸ ಲೆಂದೇ ಅವರಿಗಾಗಿಯೇ ತೆರೆಯಲಾ ಗಿರುವ ಪ್ರತ್ಯೇಕ ಹೊರರೋಗಿಗಳ ವಿಭಾಗ (ಓಪಿಡಿ)ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿಕಿತ್ಸೆ ಮತ್ತು ತಪಾಸಣೆಗಾಗಿ ಆಗಮಿಸುವ ಹಿರಿಯ ನಾಗರಿಕರು ಕಿರಿಯ ರೋಗಿಗಳೊಂದಿಗೆ ಸರದಿ ಸಾಲಿ ನಲ್ಲಿ ಕುಳಿತು ಗಂಟೆಗಟ್ಟಲೇ ಕಾಯುತ್ತ ಎದುರಿಸುತ್ತಿದ್ದ ಬವಣೆ ನೀಗಿಸಲೆಂದೇ ಈ ವಿಭಾಗ ತೆರೆಯಲಾಗಿದ್ದು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊದಲ ಬಾರಿಗೆ ಮಾಡಲಾದ ಪ್ರಯೋಗ ಯಶಸ್ವಿಯಾ ಗಿದೆ.

ಪ್ರತಿದಿನ ಸರಾಸರಿ 40ರಿಂದ 50 ಜನ ಹಿರಿಯ ನಾಗರಿಕರು ಹೊರ ರೋಗಿಗಳಾಗಿ ಈ ವಿಭಾಗದಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದು, ಅವರಲ್ಲಿ ನಿತ್ಯವೂ ಸರಾಸರಿ 15 ಜನ  ಒಳರೋಗಿಗಳಾಗಿ ಚಿಕಿತ್ಸೆ ಪಡೆಯಲು ದಾಖಲಾಗುತ್ತಾರೆ ಎಂದು ವಿಮ್ಸ ಅಧೀಕ್ಷಕ ಡಿ. ಶ್ರೀನಿವಾಸ್ ತಿಳಿಸಿದರು.

ವಿಮ್ಸ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾಗಿರುವ ಹಿಂದಿನ ಅಧೀಕ್ಷಕ  ಡಾ.ವಿದ್ಯಾಧರ ಕಿನ್ನಾಳ ಅವರ ಈ ಕನಸಿನ ಯೋಜನೆಯು ವಿಶ್ವ ವೈದ್ಯರ ದಿನಾಚರಣೆ ಅಂಗವಾಗಿ 2010ರ ಆಗಸ್ಟ್ 15ರಂದು ಉದ್ಘಾ ಟನೆಗೊಂಡಿದೆ.

ವಯೋವೃದ್ಧರಿಗೆ ಒಂದೇ ಸೂರಿನಡಿ ವಿವಿಧ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿರುವ ಈ ವಿಭಾಗದಲ್ಲಿ ವಿವಿಧ ಪರೀಕ್ಷೆಗಳಿಗಾಗಿ ಒಂದೆಡೆಯಿಂದ ಇನ್ನೊಂದೆಡೆ ಓಡಾ ಡುವ ತಾಪತ್ರಯವನ್ನೂ ನೀಗಿಸುತ್ತಿದೆ.

ಈ ವಿಭಾಗದಲ್ಲಿ ಔಷಧಶಾಸ್ತ್ರ, ಎಲುವು ಮತ್ತು ಮೂಳೆ, ಸ್ತ್ರೀರೋಗ ವಿಭಾಗ,  ಚರ್ಮ, ಶಸ್ತ್ರ ಚಿಕಿತ್ಸೆ, ದೃಷ್ಟಿ ನ್ಯೂನತೆಗಳು ಸೇರಿದಂತೆ ಒಟ್ಟು 10 ವಿಶೇಷ ವೈದ್ಯಕೀಯ ವಿಭಾಗಗಳನ್ನು ತೆರೆಯಲಾಗಿದೆ. ಪ್ರತಿ ವಿಭಾಗಗಳಿಗೆ ಒಬ್ಬೊಬ್ಬ ತಜ್ಞ ವೈದ್ಯರನ್ನೂ ನೇಮಕ ಮಾಡಲಾಗಿದೆ.

ವಿಮ್ಸ ಆಸ್ಪತ್ರೆಯ ಔಷಧಶಾಸ್ತ್ರ ವಿಭಾಗಕ್ಕೆ ಹೊಂದಿಕೊಂರುವ ಈ ವಿಭಾಗವು ಒಂದು ಕಿರು ಶಸ್ತ್ರಚಿಕಿತ್ಸಾ ಘಟಕ, ಪ್ರಯೋಗಶಾಲೆ, ಮತ್ತು ಎಕ್ಸ್-ರೇ ಸೌಲಭ್ಯ ಒಳಗೊಂಡಿದೆ. ಜತೆಗೆ ಇಸಿಜಿ ಮತ್ತು ರಕ್ತ ಪರೀಕ್ಷೆ ಯನ್ನೂ ಇಲ್ಲೇ ಮಾಡಲಾಗುತ್ತಿದೆ.

ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿ ಸಾಮಾನ್ಯ ಓಪಿಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಹಿರಿಯ ನಾಗರಿಕರಿಗೆ ನೋಂದಣಿ ಚೀಟಿ ನೀಡಿ, ಪ್ರತ್ಯೇಕ ವಿಭಾಗಕ್ಕೆ ತೆರಳಲು ಸೂಚಿಸ ಲಾಗುತ್ತದೆ. ಈ ವಿಭಾಗಕ್ಕೆ ಆಗಮಿಸುವ ಹಿರಿಯ ನಾಗರಿಕರಿಗೆ ತಜ್ಞರು ಕೂಡಲೇ ವೈದ್ಯಕೀಯ ಸೇವೆ ದೊರೆಯುವಂತೆ ಆಸ್ತೆ ವಹಿಸುತ್ತಿರುವುದು ವಿಶೇಷ.

ಕ್ಷ-ಕಿರಣ ಮತ್ತಿತರ ಪರೀಕ್ಷೆಗಳಿಗೆ ಸರದಿ ಸಾಲು ದೊಡ್ಡದಿದ್ದಾಗ ವೃದ್ಧರು ಕಾಯಬೇಕಿಲ್ಲ. ಗಾಲಿ ಖುರ್ಚಿಗಳ ಮೂಲಕ ಅವರನ್ನು ಸೂಕ್ತ ವಿಭಾಗ ಗಳಿಗೆ ಕರೆದುಕೊಂಡು ಹೋಗಿ ವೈದ್ಯಕೀಯ ಸೇವೆ ನೀಡಲಾಗುವುದು ಎಂದು ಡಾ. ವಿದ್ಯಾಧರ ಕಿನ್ನಾಳ್ `ಪ್ರಜಾವಾಣಿ'ಗೆ ವಿವರ ನೀಡಿದರು.

ಕಳೆದ ವರ್ಷ 10,722 ಮಹಿಳೆ ಯರೂ ಒಳಗೊಂಡಂತೆ 25,399 ಹಿರಿಯ ನಾಗರಿಕರಿಗೆ ಈ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗಿದೆ. ಇವರಲ್ಲಿ 5677 ಜನ ಹಿರಿಯ ನಾಗರಿಕರನ್ನು ಓಳ ರೋಗಿಗಳಾಗಿ ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗಿದೆ.

ಪ್ರಸಕ್ತ ಜನವರಿಯಿಂದ ಜೂನ್ ಅಂತ್ಯದವರೆಗೆ 5,397 ಮಹಿಳೆಯರು ಸೇರಿದಂತೆ 12,632 ಹಿರಿಯ ನಾಗರಿಕರು ಈ ವಿಶೇಷ ಸೌಲಭ್ಯ ಪಡೆದಿದ್ದಾರೆ.

ಅವರಲ್ಲಿ 1096 ಮಹಿಳಾ ರೋಗಿಗಳು ಸೇರಿದಂತೆ 2645 ಜನರು ಒಳರೋಗಿಗಳಾಗಿ  ಚಿಕಿತ್ಸೆ ಪಡೆದಿದ್ದಾರೆ.
ಬಳ್ಳಾರಿ, ಕೊಪ್ಪಳ, ರಾಯಚೂರು ನೆರೆಯ ಆಂಧ್ರದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಿಂದ ಆಸ್ಪತ್ರೆಗೆ ಆಗಮಿಸುವ 60 ದಾಟಿದ ಹಿರಿಯರು ಈ ವಿಭಾಗಕ್ಕೆ ನೇರವಾಗಿ ಆಗಮಿಸಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.