ಬಳ್ಳಾರಿ: ದೇಶದಾದ್ಯಂತ ವಿಶೇಷ ಸ್ಥಾನ ಹೊಂದಿರುವ ಕನ್ನಡದ ರಂಗಭೂಮಿಯು ಹೊಸ ಹೊಸ ಪ್ರಯೋಗಗಳ ಮೂಲಕ ಹೆಸರಾಗಿದೆ ಎಂದು ಶಕ್ತಿನಗರದ ರಂಗಸಂಘಟಕ ನಾಗಭೂಷಣ ನಾಗಳ್ಳಿ ತಿಳಿಸಿದರು.
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ರಂಗಜಂಗಮ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ಮಕ್ಕಳ ನಾಟಕೋತ್ಸವದಲ್ಲಿ ಅವರು ರಂಗಗೌರವ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
ಆಗಾಧ ಪ್ರತಿಭೆ ಹೊಂದಿರುವ ಮಕ್ಕಳಲ್ಲಿ ರಂಗಭೂಮಿಯ ಆಸಕ್ತಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಅವರು ಹೇಳಿದರು.
ಮಕ್ಕಳಿಗೆ ಕಲಿಕೆಯ ಹಂತದಲ್ಲೇ ರಂಗಭೂಮಿ ಕುರಿತು ಅರಿವು ಮೂಡಿಸುವ ಅಗತ್ಯವಿದೆ. ಜಿಲ್ಲೆಯು ರಂಗಭೂಮಿ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದು, ಬೆಳಗಲ್ಲು ವೀರಣ್ಣ, ಸುಭದ್ರಮ್ಮ ಮನ್ಸೂರ್ ಸೇರಿದಂತೆ ಹಲವರು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಪತ್ರಕರ್ತ ಸಿ.ಮಂಜುನಾಥ ತಿಳಿಸಿದರು.
ಮಕ್ಕಳು ಸದಾ ಚಟುವಟಿಕೆಯಿಂದ ಇರಲು ನಾಟಕ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ವರ್ಷವೂ ಮಕ್ಕಳ ನಾಟಕಕೋತ್ಸವ ಆಯೋಜಿಸಬೇಕು ಎಂದು ಡಾ.ಅರವಿಂದ ಪಾಟೀಲ್ ಸಲಹೆ ನೀಡಿದರು.
ಚಿತ್ರದುರ್ಗದ ರಂಗನಿರ್ದೇಶಕ ಕೆ.ಪಿ.ಎಂ. ಗಣೇಶಯ್ಯ ಅವರನ್ನು ಇದೇ ಸಂದರ್ಭ ಗೌರವಿಸಲಾಯಿತು.
ಕಟ್ಟೇಗೌಡ, ಬಸವನಗೌಡ, ಜೋಳದರಾಶಿ ಪಂಪನಗೌಡ, ರಂಗಜಂಗಮ ಸಂಘಟನೆ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ವೈ.ದೊಡ್ಡಬಸಪ್ಪ, ಅಣ್ಣಾಜಿ ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು. ಅಮಾತಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.