ADVERTISEMENT

ಭೂಸಂತ್ರಸ್ತರಿಗೆ ನ್ಯಾಯ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 3:24 IST
Last Updated 25 ಫೆಬ್ರುವರಿ 2024, 3:24 IST

ಬಳ್ಳಾರಿ: ‘ಜಿಲ್ಲೆಯಲ್ಲಿ ಕೈಗಾರಿಕೆ ಉದ್ದೇಶಕ್ಕೆ ರೈತರಿಂದ ಸ್ವಾಧೀನ ಪಡೆದ ಭೂಮಿಗೆ ಸುಪ್ರೀಂ ಕೋರ್ಟ್‌ ಆದೇಶದಂತೆ ಸೂಕ್ತ ಪರಿಹಾರ ಕೂಡಲೇ ನೀಡಬೇಕು. ಇಲ್ಲದಿದ್ದರೆ, ರೈತರು ಭೂಮಿಯನ್ನು ವಶಪಡಿಸಿಕೊಳ್ಳುವರು’ ಎಂದು ಸಿಐಟಿಯು ಕಾರ್ಮಿಕ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಜೆ.ಸತ್ಯಬಾಬು ಎಚ್ಚರಿಕೆ ನೀಡಿದರು.

‘ಬಳ್ಳಾರಿ ತಾಲ್ಲೂಕಿನ ಕುಡತಿನಿ, ಹರಗಿನದೋಣಿ, ಜಾನೆಕುಂಟೆ, ವೇಣಿ ವೀರಾಪುರ, ಕೊಳಗಲ್ಲು, ಕುರುಗೋಡು ತಾಲ್ಲೂಕಿನ ಸಿದ್ದಮ್ಮನಹಳ್ಳಿ, ಯರಂಗಳಿ ಗ್ರಾಮಗಳಲ್ಲಿ ‘ಆರ್ಸೆಲರ್‌ ಮಿತ್ತಲ್‌’, ಬ್ರಹ್ಮಿಣಿ ಸ್ಟೀಲ್ಸ್‌ (ಉತ್ತಮ ಗಾಲ್ವ), ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಕೈಗಾರಿಕೆ ಉದ್ದೇಶಕ್ಕೆ 12,414.85 ಎಕರೆ ಪ್ರದೇಶ 13 ವರ್ಷಗಳ ಹಿಂದೆ ಸ್ವಾಧೀನ ಪಡಿಸಿಕೊಂಡಿತು. ಆದರೆ, ಕೈಗಾರಿಕೆಗಳು ನಿರ್ಮಾಣಗೊಂಡಿಲ್ಲ. ರೈತರಿಗೆ ಪರಿಹಾರವೂ ಸಿಕ್ಕಿಲ್ಲ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

‘ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 3,500 ದಿಂದ 4,000 ಸಂತ್ರಸ್ತ ಕುಟುಂಬಗಳಿಗೆ ₹10ಸಾವಿರ ಕೋಟಿಯಿಂದ ₹13 ಸಾವಿರ ಕೋಟಿ ಪರಿಹಾರ ನೀಡಬೇಕು. ಕಂಪನಿಗಳಿಂದ ಪರಿಹಾರ ಕೊಡಿಸಲು ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕೂಡ ಕ್ರಮ ಕೈಗೊಳ್ಳಬೇಕು. ರೈತರು 431 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಿದ್ದಾರೆ. ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದ ವೇಳೆ ರೈತರನ್ನು ಕರೆದು ಮಾತನಾಡಿದ್ದ ಸರ್ಕಾರ ತಿಂಗಳೊಳಗೆ ಮಾತುಕತೆಗೆ ಕರೆಯುವುದಾಗಿ ಹೇಳಿತ್ತು. ಆದರೆ ಇಲ್ಲಿಯವರೆಗೆ ಏನೂ ಆಗಿಲ್ಲ’ ಎಂದರು.

ADVERTISEMENT

ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಅವರು, ‘ರೈತರ ಹೋರಾಟಕ್ಕೆ ಬೆಂಬಲ ನೀಡಲಾಗುವುದು. ಸರ್ಕಾರ ಕಾನೂನಾತ್ಮಕ ತೊಡಕು ಪರಿಹರಿಸಿ, ಪರಿಹಾರ ಒದಗಿಸಲು ಪ್ರಯತ್ನಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.