
ತುಂಗಭದ್ರಾ ಜಲಾಶಯ
ಬಳ್ಳಾರಿ: ತುಂಗಭದ್ರಾ ಕೊಳ್ಳದ ಜಿಲ್ಲೆಗಳ ಎರಡನೇ (ಬೇಸಿಗೆ) ಬೆಳೆಗೆ ನೀರು ಒದಗಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಸಿರುಗುಪ್ಪದಿಂದ ಹೊಸಪೇಟೆಗೆ ಬುಧವಾರದಿಂದ 5 ದಿನಗಳ ಪಾದಯಾತ್ರೆ ಹಮ್ಮಿಕೊಂಡಿದೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕರೂರು ಆರ್. ಮಾಧವ ರೆಡ್ಡಿ, ‘ಸಿಗುರುಪ್ಪ ತಾಲೂಕಿನ ಕರೂರಿನಿಂದ ಆರಂಭವಾಗಲಿರುವ ಪಾದಯಾತ್ರೆ ಕುರುಗೋಡು, ಕಂಪ್ಲಿ ಮೂಲಕ ಸಾಗಿ ನ.17 ರಂದು ಹೊಸಪೇಟೆಯ ತುಂಗಭದ್ರಾ ಜಲಾಶಯದ ಎದುರು ಸಮಾವೇಶಗೊಳ್ಳಲಿದೆ. ಬಳಿಕ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತದೆ’ ಎಂದು ತಿಳಿಸಿದರು.
‘ಈಗಿರುವ ಬೆಳೆಗೆ ಡಿಸೆಂಬರ್ ವರೆಗೆ ನೀರು ಪೂರೈಸಬೇಕು. ಬಳಿಕ ಎರಡನೇ ಬೆಳೆಗೆ ನೀರು ಒದಗಿಸಬೇಕು. ಜತೆಗೆ, ತುಂಗಭದ್ರಾ ಜಲಾಶಯದ ಎಲ್ಲ ಗೇಟ್ಗಳನ್ನು ಮುಂದಿನ ಜೂನ್ ಹೊತ್ತಿಗೆ ಅಳವಡಿಸಬೇಕು ಎಂಬ ಬೇಡಿಕೆಯೊಂದಿಗೆ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.
‘ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಸಾವಿರಾರು ರೈತರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ’ ಎಂದು ಮಾಧವ ರೆಡ್ಡಿ ಹೇಳಿದ್ದಾರೆ.
ಈ ಮಧ್ಯೆ, ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮತಿಯ ಸಭೆಯು 14ರಂದು ನಡೆಯಲಿದ್ದು, ಸಮಿತಿಯ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಲಸಂಪನ್ಮೂಲ ಸಚಿವರೂ ಆದ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಭೆಯಲ್ಲಿ ಇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.