ADVERTISEMENT

‘ಶೋಭಾ ಅಕ್ಕ, ಸಿ.ಟಿ.ರವಿ ತಮ್ಮ, ಈಶ್ವರಪ್ಪ ದೊಡ್ಡಣ್ಣ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 9:07 IST
Last Updated 22 ಜನವರಿ 2018, 9:07 IST
ಕೂಡ್ಲಿಗಿಯ ಚಂದ್ರಶೇಖರ್‌ ಆಜಾದ್ ರಂಗ ಮಂದಿರದಲ್ಲಿ ಭಾನುವಾರ ನಡೆದ ಸಿಪಿಐ ಪಕ್ಷದ 6ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿದ ಸಿಪಿಐ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿದರು.
ಕೂಡ್ಲಿಗಿಯ ಚಂದ್ರಶೇಖರ್‌ ಆಜಾದ್ ರಂಗ ಮಂದಿರದಲ್ಲಿ ಭಾನುವಾರ ನಡೆದ ಸಿಪಿಐ ಪಕ್ಷದ 6ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿದ ಸಿಪಿಐ ಮುಖಂಡ ಎಚ್.ಕೆ. ರಾಮಚಂದ್ರಪ್ಪ ಮಾತನಾಡಿದರು.   

ಕೂಡ್ಲಿಗಿ: ‘ಕೇಂದ್ರ ಹಾಗೂ ರಾಜ್ಯದಲ್ಲಿ ಜನ ವಿರೋಧಿಗಳ ಗುಂಪು ಅಧಿಕಾರಕ್ಕೆ ಬಂದಿದ್ದು, ಇವರನ್ನು ಅಧಿಕಾರದಿಂದ ಇಳಿಸಲು ಸಂಘರ್ಷಕ್ಕೆ ಇಳಿಯಬೇಕಾಗಿದೆ’ ಎಂದು ಸಿಪಿಯ ಹಿರಿಯ ನಾಯಕ ಎಚ್.ಕೆ. ರಾಮಚಂದ್ರಪ್ಪ ಹೇಳಿದರು. ಅವರು ಪಟ್ಟಣದ ಚಂದ್ರಶೇಖರ್ ಆಜಾದ್ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಸಿಪಿಐ ಪಕ್ಷದ 6ನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ಚುನಾವಣೆ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿಯವರು ಕೋಮು ದಳ್ಳೂರಿ ನಡೆಸಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಆಡಳಿತದಿಂದ ಸಾಮಾನ್ಯ ಜನರು ರೋಸಿ ಹೋಗಿದ್ದಾರೆ, ಅದ್ದರಿಂದ ಅವರನ್ನು ಆಡಳಿತದಿಂದ ದೂರ ಮಾಡಿ, ಜನ ಸಾಮಾನ್ಯರ ಜೀವಕ್ಕೆ ತೊಂದರೆಯಾಗದಂತೆ ದೇಶ ಕಟ್ಟಬೇಕಾಗಿದೆ’ ಎಂದರು.

‘ಅಕ್ಕ ಶೋಭಾ ಕರಂದ್ಲಾಜೆ, ತಮ್ಮ ಸಿ.ಟಿ. ರವಿ, ದೊಡ್ಡಣ್ಣ ಕೆ.ಎಸ್. ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದನ್ನು ಅರ್ಧ ತಪ್ಪಿಸಿ ಬೇರೆಯವರಿಗೆ ದಾರಿ ಮಾಡಿಕೊಡುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಪಿಐ ಮುಖಂಡ ಎ.ಆರ್.ಎಂ. ಇಸ್ಮಾಯಿಲ್ ಮಾತನಾಡಿ, ‘ಎರಡು ಕೋಟಿ ಯುವ ಜನರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಇದುವರೆಗೂ 2 ಲಕ್ಷ ಜನಕ್ಕೂ ಉದ್ಯೋಗ ಕೊಟ್ಟಿಲ್ಲ. ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಸಂಘರ್ಷ ಉಂಟು ಮಾಡುವ ರಾಜ್ಯ ಸರ್ಕಾರ ಸಾಹಿತಿಗಳನ್ನು ಕೊಲೆ ಮಾಡುತ್ತಿದೆ’ ಎಂದು ಆರೋಪಿಸಿದರು.

ಸಿಪಿಐ ರಾಜ್ಯ ಘಟಕದ ಸಹ ಕಾರ್ಯದರ್ಶಿ ಸಾತಿ ಸುಂದರೇಶ, ತಾಲ್ಲೂಕು ಕಾರ್ಯದರ್ಶಿ ಎಚ್. ವೀರಣ್ಣ, ಮುಖಂಡರಾದ ನಾಗಭೂಷಣ್ ರಾವ್, ಆರ್. ಸ್ವಾಮಿ, ಎಚ್.ಎ. ಅಧಿಮೂರ್ತಿ, ಬಿ. ಸಿದ್ಲಿಂಗಪ್ಪ, ಎಐವೈಎಫ್ ರಾಜ್ಯ ಉಪಾಧ್ಯಕ್ಷ ಕಟ್ಟಿ ಬಸಪ್ಪ, ಸಂಡೂರು ತಾಲ್ಲೂಕು ಕಾರ್ಯದರ್ಶಿ ಆರ್. ಸ್ವಾಮಿ, ದೇವೇಂದ್ರಪ್ಪ, ಹಲಗಿ ಸುರೇಶ್, ಅಂಗನವಾಡಿ ಫೆಡರೇಷನ್ ಹೊಸಪೇಟೆ ತಾಲ್ಲೂಕು ಅಧ್ಯಕ್ಷೆ ಜ್ಯೋತಿ ವಿ. ಮಾಳಿಗಿ, ಕೂಡ್ಲಿಗಿ ತಾಲ್ಲೂಕು ಅಧ್ಯಕ್ಷೆ ದಾಕ್ಷಾಯಣಿ, ಮಹಾಂತಮ್ಮ, ರತ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.