ಬಳ್ಳಾರಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 2200 ಪೊಲೀಸ್ ಸಿಬ್ಬಂದಿ, ಅರೆಸೇನಾಪಡೆಯ 3 ಸಾವಿರ ಜನ ಸೈನಿಕರು ಹಾಗೂ 500 ಜನ ಗೃಹರಕ್ಷಕರನ್ನು ಎಲ್ಲ 9 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗುವುದು ಎಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಕಾನೂನು ವಿರೋಧಿ ಚಟುವಟಿಕೆ ಸಂಭವಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಿಲ್ಲೆಯಾದ್ಯಂತ ಒಟ್ಟು 44 ತಪಾಸಣಾ ಕೇಂದ್ರ (ಚೆಕ್ಪೋಸ್ಟ್) ತೆರೆಯಲಾಗಿದ್ದು, ಕರ್ನಾಟಕ-ಆಂಧ್ರ ಗಡಿಗುಂಟ ಅರೆ ಸೇನಾಪಡೆ ತುಕಡಿಯನ್ನು ನಿಯೋಜಿಸಲಗಿದೆ. ಮಾರ್ಚ್ 20ರಂದು ಚುನಾವಣೆ ಘೋಷಣೆ ಆದಾಗಿನಿಂದ ಈವರೆಗೆ ಜಿಲ್ಲೆಯಾದ್ಯಂತ ಜರುಗಿದ ಕಾರ್ಯಾಚರಣೆಗಳಲ್ಲಿ ರೂ 53.45 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಜಿಲ್ಲೆಯ 351 ಜನ ಸಂಶಯಾಸ್ಪದ ವ್ಯಕ್ತಿಗಳಿಂದ ಯಾವುದೇ ಅಹಿತಕರ, ಕಾನೂನು ವಿರೋಧಿ ಕಾರ್ಯಗಳಲ್ಲಿ ತೊಡಗುವುದಿಲ್ಲ ಎಂಬ ಮುಚ್ಚಳಿಕೆ ಪಡೆಯಲಾಗಿದ್ದು, 60 ಜನ ರೌಡಿ ಶೀಟರ್ಗಳ ವಿರುದ್ಧ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ 10 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 5 ಪ್ರಕರಣಗಳಲ್ಲಿ ನಗದು ವಶ ಹಾಗೂ ಇನ್ನುಳಿದಂತೆ ಸಾಮೂಹಿಕ ಭೋಜನ ಕೂಟಗಳ ಆಯೋಜನೆಯಂತಹ ಪ್ರಕರಣಗಳು ಜರುಗಿವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.