
ಬಳ್ಳಾರಿ: ಬಳ್ಳಾರಿ ನಗರದ ಕೌಲ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲಕೆರೆ ಪ್ರದೇಶದಲ್ಲಿರುವ ವೀರಾಂಜನೇಯ ದೇಗುಲದ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಮೂಳೆ, ಮಾಂಸವಿದ್ದ ಪ್ಲಾಸ್ಟಿಕ್ ಚೀಲವೊಂದು ಪತ್ತೆಯಾಗಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ವೀರಾಂಜನೇಯ ದೇಗುಲದ ಆವರಣದಲ್ಲಿರುವ ವೆಂಕಟೇಶ್ವರ ಗುಡಿಯ ಮುಂದೆ ಕಪ್ಪು ಚೀಲವೊಂದು ಕಾಣಿಸಿಕೊಂಡಿತ್ತು ಎನ್ನಲಾಗಿದೆ. ದೇಗುಲದ ಅರ್ಚಕ ಉಮೇಶ್ ಶರ್ಮ ಇದನ್ನು ಮೊದಲಿಗೆ ಗಮನಿಸಿದ್ದು, ಮೊದಲಿಗೆ ಫೋಟೊ ತೆಗೆದುಕೊಂಡು, ಬಳಿಕ ದೇಗುಲದ ಕೆಲಸದವರಿಂದ ಶುಚಿ ಮಾಡಿಸಿದ್ದಾರೆ.
ಅರ್ಚಕರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಕೌಲ್ ಬಜಾರ್ ಠಾಣೆಯ ಸಿಪಿಐ ಪರಿಶೀಲನೆಯನ್ನೂ ನಡೆಸಿದರು. ಘಟನೆ ಹಿನ್ನಲೆಯಲ್ಲಿ ದೇವಸ್ಥಾನವೂ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್ ಹರ್ಷ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇದು ಕಿಡಿಗೇಡಿಗಳ ಕೃತ್ಯ ಎಂದು ದೇಗುಲದ ಅರ್ಚಕರು ಹೇಳುತ್ತಾರೆ. ನಾಯಿಗಳು ಹೀಗೆ ಮಾಡಿರಬಹುದು ಎಂದು ಕೆಲ ಮಂದಿ ಅಭಿಪ್ರಾಯಪಟ್ಟಿದ್ದಾರೆ. ದೇಗುಲದ ಅನತಿ ದೂರದಲ್ಲೇ ಹೊಸದಾಗಿ ರೆಸ್ಟೊರೆಂಟ್ ಆರಂಭವಾಗಿದ್ದು, ಅಲ್ಲಿಗೆ ತಂದಿದ್ದ ಮಾಂಸ ಮತ್ತು ಮೂಳೆಗಳ ಚೀಲವನ್ನು ನಾಯಿಗಳು ಎಳೆದು ತಂದಿರಬಹುದೂ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳಕ್ಕೆ ಬಿಜೆಪಿ ಮುಖಂಡರು, ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಗಮಿಸಿ ಹೋರಾಟ ನಡೆಸುವ ಕುರಿತು ಚರ್ಚೆ ನಡೆಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಥಳೀಯರು, ಇದನ್ನು ಗಂಭೀರ ಸ್ವರೂಪಕ್ಕೆ ತೆಗೆದುಕೊಂಡು ಹೋಗುವ ಅಗತ್ಯವಿಲ್ಲ. ನಾವೆಲ್ಲರೂ ಹಿಂದೂಗಳೇ ಆದರೆ, ಇದನ್ನು ವಿವಾದ ಮಾಡುವುದು ಬೇಡ ಎಂದು ಒತ್ತಾಯಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಪೊಲೀಸರು ಎಲ್ಲರನ್ನೂ ಸ್ಥಳದಿಂದ ಬೇರೆಡೆಗೆ ಕಳುಹಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ: ದೇಗುಲದ ಅರ್ಚಕ ಉಮೇಶ್ ಶರ್ಮ ಮಾತನಾಡಿ, ‘ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ದೇಗುಲದಲ್ಲಿ ಅಭಿಷೇಕ ನಡೆಯುತ್ತದೆ. ದೇಗುಲದ ಆವರಣದಲ್ಲಿರುವ ವೆಂಕಟೇಶ್ವರ ಗುಡಿ ಎದುರು ಶುಕ್ರವಾರ ಮುಂಜಾನೆ ಮಾಂಸದ ಚೀಲ ಕಾಣಿಸಿತು. ಇದನ್ನು ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.
ದುಷ್ಕರ್ಮಿಗಳ ಕೃತ್ಯ: ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್ ಕುಮಾರ್, ‘ದುಷ್ಕರ್ಮಿಗಳು ಬೆಳಿಗ್ಗೆ 5.30ರ ಸುಮಾರಿನಲ್ಲಿ ಗೋವಿನ ಮಾಂಸವನ್ನು ದೇಗುಲದಲ್ಲಿ ಹಾಕಿದ್ದಾರೆ. ಇದು ಹಿಂದೂ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ. ಕಿಡಿಗೇಡಿಗಳನ್ನು ಪತ್ತೆ ಹಚ್ಚಬೇಕು. ಇಂಥ ಕೆಲಸ ಬಳ್ಳಾರಿಯಲ್ಲಿ ಮೇಲಿಂದ ಮೇಲೇ ಆಗುತ್ತಿರುವುದು ನೋವಿನ ಸಂಗತಿ. ಇದನ್ನು ನಾವು ಖಂಡಿಸುತ್ತೇವೆ’ ಎಂದರು.
ವಿವಾದ ಮಾಡುವುದು ಬೇಡ: ಐಜಪಿ
ಸ್ಥಳ ಪರೀಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್ ಹರ್ಷ ‘ವಿಷಯ ತಿಳಿಯುತ್ತಲೇ ಠಾಣಾಧಿಕಾರಿ ಪರಿಶೀಲನೆ ಮಾಡಿದ್ದಾರೆ. ಯಾವ ರೀತಿ ಈ ಘಟನೆ ನಡೆದಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ. ಇದನ್ನು ವಿವಾದ ಮಾಡುವ ಸರಿಯಲ್ಲ. ಘಟನೆ ಚಿಕ್ಕದಾಗಿದ್ದರೂ ದೊಡ್ಡದಾಗಿದ್ದರೂ ಸಾಕ್ಷ್ಯಾಧಾರ ಸಹಿತ ತನಿಖೆ ನಡೆಸುತ್ತೇವೆ. ಘಟನೆ ಹೀಗೇ ಆಗಿದೆ ಎಂದು ಯಾರೂ ಹೇಳಿಲ್ಲ. ಆಕಸ್ಮಿಕೋ ಉದ್ದೇಶಪೂರ್ವಕವೋ ಎಂಬುದನ್ನು ಯಾರೂ ಹೇಳಿಲ್ಲ. ಅದರೂ ಪ್ರಕರಣ ದಾಖಲಿಸಿ ದಾಖಲಿಸಿ ತನಿಖೆ ಮಾಡುತ್ತೇವೆ. ಪೊಲೀಸ್ ಇಲಾಖೆ ತನಿಖೆ ಮಾತ್ರ ಮಾಡುತ್ತದೆ. ತೀರ್ಪು ನೀಡುವುದಿಲ್ಲ’ ಎಂದರು. ‘ಬಳ್ಳಾರಿ ಶಾಂತವಾಗಿಯೇ ಇದೆ. ಈ ಪ್ರಕರಣವನ್ನು ಮತ್ತೊಂದು ಪ್ರಕರಣದೊಂದಿಗೆ ತಳುಕು ಹಾಕುವ ಅಗತ್ಯವಿಲ್ಲ’ ಎಂದು ಖಾರವಾಗಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.